ಬಾಡಿಗೆ ಕೊಠಡಿಯಲ್ಲಿ ವಿದ್ಯಾರ್ಥಿನಿ ಕೊಲೆ – 18 ಗಂಟೆಯಲ್ಲಿ ಆರೋಪಿ ಅರೆಸ್ಟ್

Public TV
1 Min Read

ಮಂಗಳೂರು: ಯುವತಿಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣವನ್ನು 18 ಗಂಟೆಯ ಒಳಗಡೆ ಮಂಗಳೂರು ಪೊಲೀಸರು ಬೇಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂಧಗಿ ನಿವಾಸಿ ಸಂದೀಪ್ ರಾಥೋಡ್ (27) ಬಂಧಿತ ಆರೋಪಿ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದ ಅಂಜನಾ ವಶಿಷ್ಠ(22)ಕೊಲೆಯಾದಾಕೆ. ದಂಪತಿಯ ಸೋಗಿನಲ್ಲಿ ಬಂದಿದ್ದ ಆರೋಪಿ ಹಾಗೂ ವಿದ್ಯಾರ್ಥಿನಿ ಅತ್ತವಾರದ ಮನೆಯೊಂದರ ಮಹಡಿ ಮೇಲಿದ್ದ ಕೊಠಡಿಯನ್ನ ಬಾಡಿಗೆ ಪಡೆದಿದ್ದರು. ಆದರೆ ಕಳೆದ ದಿನ ಕತ್ತು ಹಿಸುಕಿ ಯುವತಿಯನ್ನು ಕೊಲೆ ಮಾಡಿ ಆರೋಪಿ ರಾಥೋಡ್ ಪರಾರಿಯಾಗಿದ್ದನು.

ಮೃತ ಅಂಜನಾ ವಶಿಷ್ಠ ಬ್ಯಾಂಕ್ ನೌಕರಿ ಪರೀಕ್ಷೆ ಬರೆಯಲೆಂದು ಬಂದಿದ್ದಳು. ಇನ್ನೂ ಆರೋಪಿ ಸಂದೀಪ್ ರಾಥೋಡ್ ಕೂಡ ಪಿಎಸ್‍ಐ ಪರೀಕ್ಷೆ ಬರೆಯಲು ಬಂದಿದ್ದನು. ನಂತರ ದಂಪತಿ ಸೋಗಿನಲ್ಲಿ ಐದು ದಿನಗಳ ಹಿಂದೆಯಷ್ಟೇ ಮಂಗಳೂರಿನ ಅತ್ತಾವರದಲ್ಲಿ ಬಾಡಿಗೆ ಕೊಠಡಿ ಪಡೆದಿದ್ದರು.

ಅಂಜನಾ ಪೋಷಕರು ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ತಯಾರಿ ನಡೆಸಿದ್ದರು. ಹೀಗಾಗಿ ಶುಕ್ರವಾರ ಬೆಳಗ್ಗೆ ಅಂಜನಾಳನ್ನು ಕೊಲೆಗೈದು ಸಂದೀಪ್ ಪರಾರಿಯಾಗಿದ್ದನು. ಕೊಠಡಿಗೆ ಹೊರಗಿನಿಂದ ಬಾಗಿಲು ಹಾಕಿ ಆರೋಪಿ ಪರಾರಿಯಾಗಿದ್ದನು. ನಿನ್ನೆ ಸಂಜೆ ಕಟ್ಟಡದ ಮಾಲೀಕರು ಅನುಮಾನದ ಮೇರೆಗೆ ಕೊಠಡಿಯ  ಬಾಗಿಲು ತೆರೆದಾಗ ಕೊಲೆ ಪ್ರಕರಣ ಬಯಲಾಗಿತ್ತು. ಇಂದು ಬೆಳಗ್ಗೆ ಸಿಂಧಗಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆ ಕುರಿತು ಮಂಗಳೂರಿನ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *