ಮೈಸೂರು: ಪ್ರಿಯಕರನ ಮುಂದೆ ಯುವತಿಯನ್ನು ಗ್ಯಾಂಗ್ರೇಪ್ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಕುಮಾರ್ (25), ಸೂರ್ಯಕುಮಾರ್(23), ದಿಲೀಪ್(26), ಜೀವನ್(25), ಪ್ರಶಾಂತ್( 27) ಬಂಧಿತ ಆರೋಪಿಗಳು. ಆರೋಪಿಗಳೆಲ್ಲಾ ಸ್ಥಳೀಯ ನಿವಾಸಿಗಳಾಗಿದ್ದು, ಯುವತಿ ಮೇಲೆ ಇದ್ದ ಹಳೆ ದ್ವೇಷವನ್ನು ತೀರಿಸಿಕೊಳ್ಳಲು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆರೋಪಿಗಳು ಸಂತ್ರಸ್ತ ಯುವತಿ ಜೊತೆಗಿದ್ದ ಯುವಕ ಶಿವಸಿದ್ದು ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದರು.
ಏನಿದು ಪ್ರಕರಣ?
ಮೇ 8ರಂದು ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಸಂತ್ರಸ್ತ ಯುವತಿ ಲಾಡ್ಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಮೇ 8ರ ತಡರಾತ್ರಿ ಯುವತಿ ತನ್ನ ಪ್ರಿಯಕರನ ಜೊತೆ ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದಳು.
ಯುವತಿ ಹಾಗೂ ಆಕೆಯ ಪ್ರಿಯಕರ ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶಕ್ಕೆ ಹೋಗಿ ಅಲ್ಲಿಯೇ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಇದೇ ಪ್ರದೇಶದಲ್ಲಿ ಕಾರಿನಲ್ಲಿ ಕುಳಿತುಕೊಂಡು ಐದು ಮಂದಿ ಮದ್ಯ ಸೇವನೆ ಮಾಡುತ್ತಿದ್ದರು. ಪ್ರೇಮಿಗಳು ಸ್ಥಳದಲ್ಲಿ ಇರುವುದನ್ನು ನೋಡಿ ಏಕಾಏಕಿ ಶಿವ ಸಿದ್ದು ಮೇಲೆ ಹಲ್ಲೆ ಮಾಡಿದ್ದರು. ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಬಳಿಕ ಆತನ ಮುಂದೆಯೇ ಐದು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.