ಸ್ವಾಭಿಮಾನಿ ವಿಜಯೋತ್ಸವದ ಫ್ಲೆಕ್ಸ್‌ನಲ್ಲಿ ರಾರಾಜಿಸಿದ ಕೈ ನಾಯಕರು

Public TV
1 Min Read

ಮಂಡ್ಯ: ನೂತನ ಸಂಸದೆ ಸುಮಲತಾ ಅಂಬರೀಶ್ ಕೃತಜ್ಞತಾ ಸಮಾವೇಶದ ಫ್ಲೆಕ್ಸ್ ನಲ್ಲಿ ಕಾಂಗ್ರೆಸ್ ಮುಖಂಡರ ಫೋಟೋಗಳು ರಾರಾಜಿಸುತ್ತಿವೆ.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಇಂದು ಸ್ವಾಭಿಮಾನದ ಸಮಾವೇಶ ನಡೆಯಲಿದೆ. ಹೀಗಾಗಿ ಸಮಾವೇಶದ ಕುರಿತು ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಜಮೀರ್ ಅಹಮದ್, ನರೇಂದ್ರಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಫೋಟೋಗಳು ಇವೆ.

ಸುಮಲತಾ ಗೆಲುವಿನ ಹಿಂದೆ ಕಾಂಗ್ರೆಸ್‍ನ ಘಟಾನುಘಟಿಗಳ ಪರೋಕ್ಷ ಬೆಂಬಲವಿತ್ತು ಎಂಬ ಚರ್ಚೆ ಆರಂಭದಿಂದಲೂ ಕೇಳಿ ಬಂದಿತ್ತು. ಇದೀಗ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಗಳು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಸ್ವಾಭಿಮಾನಿಗಳ ವಿಜಯೋತ್ಸವಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾವಿರಾರು ಜನರು ಸೇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಕೆಎಸ್‍ಆರ್‍ಪಿ 2, ಡಿಎಆರ್ 4 ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ರೆಬೆಲ್ ಸ್ಟಾರ್ ಅಂಬಿ ಜನ್ಮದಿನವಾದ ಇಂದೇ ಸಕ್ಕರೆ ನಾಡಲ್ಲಿ ಸುಮಲತಾ & ಟೀಂ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದು, ಸಮಾವೇಶದಲ್ಲಿ ಜೋಡೆತ್ತುಗಳೂ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯದತ್ತ ಪಯಣ ಬೆಳೆಸಿರುವ ಸುಮಲತಾ, ಸಂಜೆ 4 ಗಂಟೆಗೆ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರು, ಕಾವೇರಿ ನೀರು ಹಾಗೂ ಬಿಜೆಪಿ ಸೇರುವ ಬಗ್ಗೆ ನಿಲುವು ಸ್ಪಷ್ಟಪಡಿಸುವ ಸಾಧ್ಯತೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *