ಲೋಕ ಚುನಾವಣೆಯಲ್ಲಿ ಮೈತ್ರಿ ಬೇಡವಾಗಿತ್ತು: ಸಚಿವ ಜಮೀರ್

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು. ಇಂತಹ ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಲೋಕ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ರೀತಿಯ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಬಾರದಿತ್ತು. ಈ ಅಭಿಪ್ರಾಯ ವೈಯಕ್ತಿಕವಾದ ಅಭಿಪ್ರಾಯ ಅಷ್ಟೇ. ಈಗ ಜನರು ತೀರ್ಪು ನೀಡಿದ್ದು, ಅವರ ನಿರ್ಧಾರವನ್ನು ಗೌರವಿಸಬೇಕಿದೆ ಎಂದರು.

ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಅವರ ಗೆಲುವು ಸುಲಭವಾಗಿರಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮೈತ್ರಿ ಇಲ್ಲದಿದ್ದರೆ ಸುಮಲತಾ ಅವರಿಂದ ಸುಲಭವಾಗಿ ಗೆಲ್ಲುವ ಅವಕಾಶ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ ಮುಂದುವರಿಸಿದೆ ಎಂದು ಆರೋಪಿಸಿದರು. ಚುನಾವಣೆಯಲ್ಲಿ ಫಲಿತಾಂಶ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 4 ವರ್ಷ ಸರ್ಕಾರ ಮುಂದುವರಿಯುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಮೈತ್ರಿ ಸರ್ಕಾರದಿಂದಲೇ ಈ ಫಲಿತಾಂಶ ಬಂದಿದೆ ಎನ್ನುವುದು ತಪ್ಪು. ಕರ್ನಾಟಕದಲ್ಲಿ ಮೈತ್ರಿಯಿಂದ ಈ ಫಲಿತಾಂಶ ಬರಲು ಮೈತ್ರಿ ಕಾರಣ ಎಂದರೆ ಬೇರೆ ರಾಜ್ಯಗಳಲ್ಲಿ ಉತ್ತಮ ಫಲಿತಾಂಶ ಬರಬೇಕಿತ್ತು. ಆದರೆ ಅಲ್ಲಿಯೂ ಭಿನ್ನ ಫಲಿತಾಂಶ ಬಂದಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಮುಂದಿನ ಹೋರಾಟದ ಹಾದಿಯನ್ನ ರೂಪಿಸುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *