ಮೀನು ಬೇಟೆಯಾಡಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ ಭಕ್ತರು!

Public TV
1 Min Read

– ಮಂಗ್ಳೂರಿನ ಮೂಲ್ಕಿಯಲ್ಲಿ ಮೀನು ಜಾತ್ರೆ

ಮಂಗಳೂರು: ಈ ದೈವಸ್ಥಾನದ ಪಕ್ಕದಲ್ಲಿರುವ ನದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಮೀನು ಹಿಡಿಯುತ್ತಾರೆ. ಹಾಗಂತ ಅವರೆಲ್ಲರು ಮೀನುಗಾರರು ಅಲ್ಲ. ಬದಲಾಗಿ ಭಕ್ತರು. ತಾವು ಹಿಡಿದ ಮೀನನ್ನು ದೇವರ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ.

ಮಾರಿ ಜಾತ್ರೆ, ದೈವ ಜಾತ್ರೆ, ಊರ ಜಾತ್ರೆ ಎಲ್ಲಾ ಕೇಳಿರುತ್ತೇವೆ. ಆದರೆ ಮಂಗಳೂರಿನ ಮೂಲ್ಕಿ ಸಮೀಪದ ಚೇಳ್ಯಾರು ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ಮೀನು ಜಾತ್ರೆ ನಡೆಯುತ್ತದೆ. ಭಕ್ತರು ಮೀನು ಹಿಡಿಯುವ ಮೂಲಕ ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತಿದೆ.

ನಂದಿನಿ ನದಿಗೆ ಪ್ರಸಾದ ಹಾಕಿದ ನಂತರ ಪಟಾಕಿ ಸಿಡಿಸಲಾಗತ್ತದೆ. ಆಗ ಮಕ್ಕಳು, ಮುದುಕರೆನ್ನದೆ ಎಲ್ಲರೂ ನೀರಿಗಿಳಿದು ಮೀನಿನ ಬೇಟೆ ಆರಂಭಿಸುತ್ತಾರೆ. ದೈವದ ಅನುಗ್ರಹದಿಂದ ಅಂದು ಹೆಚ್ಚಿನ ಮೀನುಗಳು ಇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ನದಿಗಿಳಿದ ಪ್ರತಿಯೊಬ್ಬರಿಗೂ ಪದಾರ್ಥಕ್ಕೆ ಬೇಕಾಗುವ ಮೀನು ಸಿಗದೇ ಇರೋದಿಲ್ಲವಂತೆ.

ಸಾವಿರಾರು ಭಕ್ತರು ನದಿಗಿಳಿಯೋದರಿಂದ ನೀರು ತಲ್ಲಣಗೊಂಡು ಮೀನುಗಳು ಮೇಲಕ್ಕೆ ಬರುತ್ತವೆ. ಮುಂಜಾನೆಯಿಂದ ಮೀನಿನ ಬೇಟೆಯಲ್ಲಿರುವ ಭಕ್ತರು ಸೂರ್ಯ ನೆತ್ತಿ ಮೇಲೆ ಬಂದಾಗ ಬಲೆಗೆ ಬಿದ್ದ ಮೀನನ್ನೆಲ್ಲಾ ಮನೆಗೆ ಕೊಂಡೊಯ್ದು ದೇವರ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಈ ಜಾತ್ರೆಯ ಮೀನನ್ನು ತಿಂದರೆ ವರ್ಷವಿಡೀ ಯಾವುದೇ ರೋಗರುಜಿನಗಳು ಬರೋದಿಲ್ಲ ಎನ್ನುವುದು ಭಕ್ತರ ನಂಬಿಕೆ.

ಈ ಶ್ರದ್ಧಾ ಭಕ್ತಿಯ ಮೀನು ಹಿಡಿಯುವ ಉತ್ಸವದೊಂದಿಗೆ ತುಳುನಾಡಿನ ಎಲ್ಲಾ ಜಾತ್ರೆಗಳಿಗೆ ತೆರೆ ಬೀಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *