ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ

Public TV
1 Min Read

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಕಂಗಲಾಗಿದ್ದು, ಸಿಡಿಲು ಬಡಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ. ಇತ್ತ ಬಳ್ಳಾರಿಯಲ್ಲಿ ಕಾಲೇಜು ವಿದ್ಯಾರ್ಥಿಯನ್ನ ಸಿಡಿಲು ಬಲಿ ಪಡೆದಿದೆ.

ಮೃತರನ್ನ ಮಂಜುನಾಥ್ ಆಚಾರ್ (50) ಹಾಗೂ ಭಾರತಿ (43) ಎಂದು ಗುರುತಿಸಲಾಗಿದೆ. ಬಳ್ಳಾರಿ ವೆಂಕಟೇಶ್ (20) ಮೃತ ವಿದ್ಯಾರ್ಥಿ. ಗೌತಮ ನಗರದ ಹಾಸ್ಟೆಲ್ ನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ವೆಂಕಟೇಶ್ ಸಂಜೆ ಹೊರ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.

ಇತ್ತ ಬೆಳಗ್ಗೆಯಿಂದ ಸಂಜೆಯವರೆಗೂ ತೇಗೂರು ಬಳಿಯ ತಮ್ಮ ಜಮೀನಿನಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಸಂಜೆ ವೇಳೆಗೆ ಮಳೆ ಬಂದ ಕಾರಣ ಮೇಯಲು ಬಿಟ್ಟಿದ್ದ ಹಸುಗಳನ್ನು ಹೊಡೆದುಕೊಂಡು ಮನೆಗೆ ಬರುವಾಗ ತೇಗೂರು ಕೆರೆ ಏರಿ ಮೇಲೆ ಸಿಡಿಲು ಬಡಿದು ದುರ್ಘಟನೆ ನಡೆದಿದೆ.

35-38 ಡಿಗ್ರಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಚಿಕ್ಕಮಗಳೂರು ಜನ ಭಾರೀ ಗುಡುಗು-ಸಿಡಿಲು ಸಮೇತ ಸುರಿದ ಮಳೆಗೆ ಹೈರಾಣಾಗಿದ್ದಾರೆ. ಇತ್ತ ರೈತರು ತೋಟಗಾರಿಕೆ ಹಾಗೂ ಕೃಷಿ ಚಟುವಟಿಕೆ ನಡೆಸಲು ಮಳೆಯ ಅಗತ್ಯವಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಶಿವಮೊಗ್ಗ, ರಾಯಚೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಶಕುನವಳ್ಳಿ, ಶಂಕರಿಕೊಪ್ಪದಲ್ಲಿ ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ಗ್ರಾಮದ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *