ಚಿಕ್ಕಬಳ್ಳಾಪುರದಲ್ಲಿ ಶಾಸಕನ ಆಪ್ತನಿಂದ ಮತದಾರರಿಗೆ ಹಣ ಹಂಚಿಕೆ – ಕೇಸ್ ದಾಖಲು

Public TV
1 Min Read

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯನೊರ್ವ ಮತದಾರರಿಗೆ ಹಣ ಹಂಚಿಕೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯ 5ನೇ ವಾರ್ಡಿನ ನಗರಸಭಾ ಸದಸ್ಯ ಮಂಜುನಾಥಾಚಾರಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದ ವಿಡಿಯೋ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿಕ್ಕಬಳ್ಳಾಪುರ ನಗರದ ನಗರ ಪೊಲೀಸ್ ಠಾಣೆಯ ಕ್ವಾಟ್ರಾಸ್ ಹಿಂಭಾಗದ ನಗರಸಭಾ ಸದಸ್ಯ ಮಂಜುನಾಥಾಚಾರಿಗೆ ಸೇರಿದ ಕಚೇರಿಯಲ್ಲಿ ರಾಜಾರೋಷವಾಗಿ ಹಣ ಹಂಚಿಕೆ ಮಾಡಲಾಗುತ್ತಿತ್ತು.

ಮಾಹಿತಿ ತಿಳಿದ ಪಬ್ಲಿಕ್ ಟಿವಿ ರಹಸ್ಯ ಕ್ಯಾಮೆರಾದಲ್ಲಿ ಹಣ ಹಂಚಿಕೆಯ ದೃಶ್ಯ ಸೆರೆ ಹಿಡಿದಿದೆ. ವೋಟರ್ ಕಾರ್ಡ್ ಹಾಗೂ ಮತದಾನದ ಸ್ಲಿಪ್ ತೆಗೆದುಕೊಂಡ ಹೋಗುವ ಮತದಾರರಿಗೆ ತಲಾ 200, 300 ರೂ. ಹಂಚಿಕೆ ಮಾಡಲಾಗುತ್ತಿತ್ತು. ಇತ್ತ ಪಬ್ಲಿಕ್ ಟಿವಿ ಹಣ ಹಂಚಿಕೆ ಚಿತ್ರೀಕರಣ ಮಾಡಿದ ವಿಷಯ ತಿಳಿದ ನಗರಸಭಾ ಸದಸ್ಯ ಮಂಜುನಾಥಾಚಾರಿ ಹಣ ಹಂಚಿಕೆ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ಚುನಾವಣಾಧಿಕಾರಿ ಅನಿರುದ್ಧ ಶ್ರವಣ್‍ಗೆ ಮಾಹಿತಿ ರವಾನಿಸಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಚುನಾವಣಾ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಪರಿಶೀಲನೆ ನಡೆಸಿದ ನಂತರ ಚುನಾವಣಾಧಿಕಾರಿ ಸಂಜೀವಪ್ಪ ಅವರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಗರಸಭಾ ಸದಸ್ಯ ಮಂಜುನಾಥಾಚಾರಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *