ರಾತ್ರೋರಾತ್ರಿ ದಾಳಿ – ಚೀಲ, ಬಾಕ್ಸ್‌ನಲ್ಲಿ ತುಂಬಿದ್ದ 10 ಲಕ್ಷ ಹಣ ಪತ್ತೆ

Public TV
1 Min Read

ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಮುನಿಯಪ್ಪ ಸಂಬಂಧಿ ಹಾಗೂ ಆಪ್ತ ಕುಮಾರ್ ಮನೆ, ಕಚೇರಿ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 10 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹ ಹಾಗೂ ಹಂಚಿಕೆ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇರೆಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಜೆ.ಮಂಜುನಾಥ್, ಚುನಾವಣಾ ವೀಕ್ಷಣಾಧಿಕಾರಿ, ಐಟಿ ಅಧಿಕಾರಿ ರೀಚಲ್, ತ್ಯಾಗರಾಜ್, ಪಾಲಯ್ಯ ನೇತೃತ್ವದ ತಂಡ ದಾಳಿ ಮಾಡಿ ಸುಮಾರು 10 ಲಕ್ಷದಷ್ಟು ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 12 ಗಂಟೆಗೆ ದಾಳಿ ಮಾಡಿದ ಅಧಿಕಾರಿಗಳ ತಂಡ ಮನೆ ಹಾಗೂ ಕಚೇರಿಯ ಇಂಚಿಂಚು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಒಂದು ಚೀಲದಲ್ಲಿ ಮತದಾರರಿಗೆ ಹಂಚಲು ತುಂಬಿಸಲಾಗಿದೆ ಎನ್ನಲಾದ 2.5 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಅಷ್ಟೇ ಅಲ್ಲದೇ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾಧಿಕಾರಿಗಳಿಂದ ಮತ್ತೊಂದು ಮನೆ ಪರಿಶೀಲನೆ ನಡೆಸಿದ ವೇಳೆ ಮತ್ತೊಂದು ಮನೆಯಲ್ಲಿ 7.5 ಲಕ್ಷ ಹಣವನ್ನ ವಶಕ್ಕೆ ಪಡೆಯಲಾಗಿದೆ. ಮುಂಜಾನೆಯವರೆಗೂ ಮತ್ತಷ್ಟು ಶೋಧ ಕಾರ್ಯವನ್ನ ಐಟಿ ಹಾಗೂ ಚುನಾವಣಾಧಿಕಾರಿಗಳು ಮುಂದುವರಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *