ನನಗೆ 3 ಬಾರಿ ಸಿಎಂ ಹುದ್ದೆ ಕೈ ತಪ್ಪಿದೆ, ಪಕ್ಷದ ವಿರುದ್ಧ ಮುನಿಸಿಕೊಂಡ್ನಾ: ಖರ್ಗೆ ಪ್ರಶ್ನೆ

Public TV
1 Min Read

– ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ

ಕಲಬುರಗಿ: ನನಗೂ ಮೂರು ಬಾರಿ ಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದೆ. ಹಾಗಂತ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದೇನಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯ ಪಟ್ನಾ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕಾರಣಗಳಿಂದಾಗಿ ನನಗೆ ಸಿಎಂ ಸ್ಥಾನ ತಪ್ಪಿದೆ. ಅದಕ್ಕಾಗಿ ನಾನು ಪಕ್ಷದ ವಿರುದ್ಧ ಯಾವತ್ತೂ ಮಾತನಾಡಲಿಲ್ಲ. ನನಗೆ ಪಕ್ಷದ ತತ್ವ ಸಿದ್ಧಾಂತಗಳು ಹಾಗೂ ಜನಪರ ಕಾಳಜಿ ಮುಖ್ಯ ಎಂದು ಹೇಳುವ ಮೂಲಕ ಸಿಎಂ ಆಗುವ ಆಸೆಯನ್ನು ಹೊರಹಾಕಿದರು.

ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ. ಕೆಟ್ಟದ್ದನ್ನು ಮಾಡಿದರೆ ನಿಮಗೆ ಕೆಟ್ಟದ್ದೆ ಆಗುತ್ತದೆ ಎಂದು ಭಗವಾನ್ ಬುದ್ಧ ಹೇಳಿದ್ದಾನೆ. ಹರಕೆ ಹೊತ್ತರೆ ಮಕ್ಕಳಾಗಲ್ಲ. ಮದುವೆಯಾಗಬೇಕು, ಸೋಬಾನ ನಡೆಯಬೇಕು ಆಗಲೇ ಮಕ್ಕಳಾಗುತ್ತವೆ. ಇದು ನಿಸರ್ಗ ನಿಯಮ. ಹೀಗಾಗಿ ಒಂದು ನಿರ್ದಿಷ್ಟ ತತ್ವ, ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆಗ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ನಾನು ಯಾವಾಗಲೂ ಕೋಪದಿಂದಲೇ ಮಾತನಾಡುತ್ತೇನೆ, ಮುಖ ಗಂಟು ಹಾಕಿಕೊಂಡು ಇರುತ್ತೇನೆ ಎಂದು ಕೆಲವರು ಹೇಳುತ್ತಾರೆ. ಹೀಗೆ ಇರುವುದು ಮನುಷ್ಯನ ಸ್ವಭಾವ. ಕೆಲವು ಜನರು ನಗುತ್ತಾರೆ, ಕೆಲಸ ಮಾಡುವುದಿಲ್ಲ. ಆದರೆ ನನಗೆ ನಗುವುದಕ್ಕೆ ಬರುವುದಿಲ್ಲ, ಕೆಲಸ ಮಾಡಲಿಕ್ಕೆ ಬರುತ್ತದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *