ರಾಯಚೂರು: ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಅಣ್ಣ-ತಂಗಿ ಮೃತಪಟ್ಟಿದ್ದು, ಬಾಲಕನೋರ್ವ ಆಶ್ಚರ್ಯ ರೀತಿಯಲ್ಲಿ ಪಾರಾಗಿರುವ ಘಟನೆ ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ಅಸ್ಕಿಹಾಳ ಗ್ರಾಮದ 26 ವರ್ಷದ ಗೌರಿಶಂಕರ್ ಹಾಗೂ 22 ವರ್ಷದ ಕೀರ್ತಿ ಮೃತ ದುರ್ದೈವಿಗಳು. ಅಪಘಾತದಲ್ಲಿ ಗೌರಿಶಂಕರ್ ಅವರ ಮಗ ಪಾರಾಗಿದ್ದಾನೆ. ಅಪಘಾತದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ ಎನ್ನಿಸುವಂತಿದೆ.
ಮೃತ ಗೌರಿಶಂಕರ್ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಹೆಂಡತಿಯನ್ನ ಮಾತನಾಡಿಸಿಕೊಂಡು ಮನೆಗೆ ಹೊರಟಿದ್ದರು. ಜೊತೆಗೆ ಆತನ ಸಹೋದರಿ ಕೀರ್ತಿ ಮತ್ತು ಮಗ ಇದ್ದರು. ಈ ವೇಳೆ ಬಸವೇಶ್ವರ ವೃತ್ತದಲ್ಲಿ ನಿಧಾನವಾಗಿ ಲಾರಿ ಮುಂದು ಹೋಗುತ್ತಿದ್ದರು. ಆಗ ಲಾರಿ ಅವರಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಮೂವರು ಲಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಲಾರಿ ಬೈಕ್ ಮೇಲೆ ಹರಿದಿದೆ. ಪರಿಣಾಮ ಅಣ್ಣ-ತಂಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಅಪಘಾತದಲ್ಲಿ ಗೌರಿಶಂಕರ್ ಅವರ ಮಗ ಲಾರಿ ಮುಂದೆ ಹೋದ ಬಳಿಕ ಎದ್ದು ಭಯದಿಂದ ಓಡಿಹೋಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ನಡೆದಿದ್ದು, ಈ ಕುರಿತು ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.