ಬೆಂಗಳೂರು: ಲೋಕಸಭಾ ಚುನಾವಣೆಯ ಕಾವಿನ ಮಧ್ಯೆ ರಣಬಿಸಿಲು ಕರುನಾಡನ್ನು ಹೈರಾಣಾಗಿಸಿದೆ. ಈ ಮಧ್ಯೆ ಲೋಕಸಮರ ಮುಗಿದ ತಕ್ಷಣ ರಾಜ್ಯದಲ್ಲಿ ಕರೆಂಟ್ ಶಾಕ್ ಕಾಡಲಿದೆ.
ಲೋಕಸಮರದ ಮಧ್ಯೆ ಈ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಅಭಾವ ತೀವ್ರ ಕಾಡುತ್ತಿದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕದಲ್ಲಿ ಕಲ್ಲಿದ್ದಲ ಕೊರತೆ ಶುರುವಾಗಿದ್ದು, ಇಂಧನ ಇಲಾಖೆ ತಲೆಕೆಡಿಸಿಕೊಂಡಿದೆ. ಸಾಮಾನ್ಯವಾಗಿ ಹದಿನೈದು ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕು. ಆದರೆ ಈಗ ಎರಡು ದಿನಗಳಿಗಾಗುವಷ್ಟು ಮಾತ್ರ ಸ್ಟಾಕ್ ಇದೆ. ಒಂದು ದಿನ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾದರೂ ಕರುನಾಡು ಕಗ್ಗತ್ತಲಲ್ಲಿ ಮುಳುಗಬೇಕಾಗುವ ಪರಿಸ್ಥಿತಿ ಉದ್ಭವವಾಗಲಿದೆ.
ಇತ್ತ ಚುನಾವಣೆಯ ಹೊತ್ತಲ್ಲೆ ಲೋಡ್ ಶೆಡ್ಡಿಂಗ್ ಮಾಡಿದರೆ ತೊಂದರೆಯಾಗಲಿದೆ ಎಂದು ಮೈತ್ರಿ ಸರ್ಕಾರ ತಲೆಕೆಡಿಸಿಕೊಂಡಿದೆ. ಮತದಾನ ಮುಗಿಯೋವರೆಗೆ ಲೋಡ್ ಶೆಡ್ಡಿಂಗ್ ಮಾಡುವ ಹಾಗಿಲ್ಲ. ಕೃಷಿ ಪಂಪ್ಸೆಟ್ಗಳಿಗೂ ಕರೆಂಟ್ ಕಟ್ ಮಾಡುವ ಹಾಗಿಲ್ಲ. ಏನಿದ್ದರೂ ಆಮೇಲೆ ನೋಡೋಣ ಎಂದು ಸಿಎಂ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿದ್ದು, ಲೋಡ್ಶೆಡ್ಡಿಂಗ್ ಮಾಡದೇ ಇದ್ದರೆ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳುವುದು ಎಂದು ತಲೆಕೆಡಿಸಿಕೊಂಡಿದ್ದಾರೆ. ಇನ್ನು ಬೆಂಗಳೂರಿನಲ್ಲಂತೂ ಬೇಸಿಗೆಯ ಬಿಸಿಗೆ ದಾಖಲೆಯ ಮಟ್ಟದಲ್ಲಿ ವಿದ್ಯುತ್ ಪೂರೈಕೆಗೆ ಡಿಮ್ಯಾಂಡ್ ಶುರುವಾಗಿದೆ.