ಪತ್ನಿಯ ಶವ ನೋಡಿ ನೇಣಿಗೆ ಶರಣಾದ ಶಿಕ್ಷಕ

Public TV
1 Min Read

ಮಡಿಕೇರಿ: ಬಾಡಿಗೆ ಮನೆಯೊಂದರಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಮಹಾದೇವಪೇಟೆ ಬಳಿಯ ಪಂಪಿನ ಕೆರೆ ಬಳಿ ನಡೆದಿದೆ.

ಮೂಲತಃ ತುಮಕೂರು ಸಮೀಪದ ತಿಪಟೂರಿನ ನಿವಾಸಿಯಾಗಿರುವ ಚೇತನ್ ಕುಮಾರ್ ಟಿ.ಪಿ(34) ಹಾಗೂ ವಾಣಿ ಎ.ಜೆ(28) ಮೃತ ದುರ್ದೈವಿಗಳು. ಚೇತನ್ ಮಡಿಕೇರಿಯ ರಾಜೇಶ್ವರಿ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ವಾಣಿ ಗೃಹಿಣಿಯಾಗಿದ್ದರು. ನಾಲ್ಕು ವರ್ಷದ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 3 ವರ್ಷದ ಪುಟಾಣಿ ಮಗುವಿದೆ.

ದಂಪತಿ ಮಧ್ಯೆ ಆಗಾಗ್ಗೆ ವೈಯಕ್ತಿಕ ವಿಚಾರಕ್ಕಾಗಿ ಕಲಹ ನಡೆಯುತ್ತಿದ್ದು, ಈ ಬಗ್ಗೆ ಚಿಕ್ಕಮಗಳೂರು ಠಾಣೆಯಲ್ಲೂ ದೂರು ದಾಖಲಾಗಿತ್ತು. ಸೋಮವಾರ ಶಾಲೆಗೆ ತೆರಳಿದ ಶಿಕ್ಷಕ ಚೇತನ್ ಸುಮಾರು 12 ಗಂಟೆ ಸುಮಾರಿಗೆ ರಜೆ ಹಾಕಿ ಮನೆಗೆ ಬಂದಿದ್ದರು. ಪತಿ ಮನೆಗೆ ಬರುವಷ್ಟರಲ್ಲಿ ಪತ್ನಿ ವಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ಚೇತನ್ ಕುಮಾರ್ ತನ್ನ ತಂದೆಗೆ ಕರೆ ಮಾಡಿ ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಬನ್ನಿ ಎಂದು ತಿಳಿಸಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *