ಮೊಮ್ಮಕ್ಕಳ ಜೊತೆ ಆಗಮಿಸಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

Public TV
1 Min Read

ಬಳ್ಳಾರಿ: ಕ್ಷೇತ್ರದ ಲೋಕಸಭಾ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಳೆ (ಮಂಗಳವಾರ) ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಆದರೆ ಇಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರು ಸಾಂಕೇತಿಕವಾಗಿ ನಾಮಪತ್ರವೊಂದನ್ನು ಸಲ್ಲಿಕೆ ಮಾಡಿದ್ದಾರೆ.

ನಾಳೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯ ನಾಯಕರು ಹಾಗೂ ಸಾಕಷ್ಟು ಮುಖಂಡರು ಭಾಗಿಯಾಗುವ ಸಾಧ್ಯತೆ ಇರುವುದರಿಂದ ನಾಮಪತ್ರ ಸಲ್ಲಿಕೆ ವೇಳೆ ದಾಖಲೆಗಳ ಪರಿಶೀಲನೆಗೆ ತೊಂದರೆಯಾಗಬಹುದು ಎಂದು ದೇವೇಂದ್ರಪ್ಪ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ವಿಶೇಷ ಏನೆಂದರೆ ದೇವೇಂದ್ರಪ್ಪ ಅವರು ಶಾಸಕ ಸೋಮಶೇಖರರೆಡ್ಡಿ, ಮಾಜಿ ಎಂಎಲ್‍ಸಿ ಸೇರಿದಂತೆ ಮೊಮ್ಮಕ್ಕಳ ಜೊತೆ ಆಗಮಿಸಿ ಹಲವು ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ದೇವೇಂದ್ರಪ್ಪ ಅವರು ನಾಳೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ.

ಬಳ್ಳಾರಿ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಗ್ರೆಸ್-ಬಿಜೆಪಿ ಆರೋಪ ಪ್ರತ್ಯಾರೋಪ ಕೇಳಿ ಬಂದಿತ್ತು. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ದೇವೇಂದ್ರಪ್ಪಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡಿ ವಾಗ್ದಾಳಿ ನಡೆಸಿದ್ದರು.

ದೇವೇಂದ್ರಪ್ಪನವರಿಗೆ ಓದಲು ಬರುವುದಿಲ್ಲ. ಬರೆಯಲು ಬರುವುದಿಲ್ಲ. ಇನ್ನು ಸಂಸತ್‍ನಲ್ಲಿ ಅವರು ಏನು ಮಾತಾಡ್ತಾರೋ ಎಂದು ಸಚಿವ ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರಪ್ಪ, ನಾನು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ತಿಳಿದವನು. ರಾಜಕೀಯದಲ್ಲಿ ನಾನೇನೂ ದಡ್ಡನಲ್ಲ, ನಂಗೂ ಅನುಭವ ಇದೆ. ಅವರಿಂದ ನಾನೇನೂ ಕಲಿಯಬೇಕಾಗಿಲ್ಲ. ಮುಂದೆ ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನೇ ಬರೆಯುವೆ ಎಂದು ಮಾತಿನ ಛಾಟಿ ಬೀಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *