ಸಚಿವ ಡಿಕೆಶಿ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಖಡಕ್ ತಿರುಗೇಟು

Public TV
1 Min Read

ಬಳ್ಳಾರಿ: ಜಿಲ್ಲೆಯ ಲೋಕ ರಣಕಣದಲ್ಲಿ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿಯ ವಿರುದ್ಧ ಭಾಷಣ ಮಾಡುತ್ತಾ ತೇಜೋವಧೆ ಮಾಡುತ್ತಿದ್ದಾರೆ. ಆದ್ರೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಅನ್ನೋ ಮೂಲಕ ಬಿಜೆಪಿ ಅಭ್ಯರ್ಥಿ, ಕೈ ನಾಯಕರಿಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

ಹೌದು. ಬಳ್ಳಾರಿ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಗ್ರೇಸ್-ಬಿಜೆಪಿ ಆರೋಪ ಪ್ರತ್ಯಾರೋಪ ಮಾಡೋ ಮೂಲಕ ತೇಜೋವಧೆಗೆ ನಿಂತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ದೇವೇಂದ್ರಪ್ಪಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ದೇವೇಂದ್ರಪ್ಪಗೆ ಓದೋಕೆ ಬರಲ್ಲ, ಬರೆಯೋಕೆ ಬರಲ್ಲ, ಇನ್ನು ಸಂಸತ್‍ನಲ್ಲಿ ಅವರೇನೂ ಮಾತಾಡ್ತಾರೋ ಎಂದು ಸಚಿವ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

ಇದಕ್ಕೆ ಬಿಜೆಪಿ ಹುರಿಯಾಳು ದೇವೇಂದ್ರಪ್ಪ ಸಹ ಸರಿಯಾಗೆಯೇ ತಿರುಗೇಟು ನೀಡಿದ್ದಾರೆ. ನಾನು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ತಿಳಿದವನು. ರಾಜಕೀಯದಲ್ಲಿ ನಾನೇನೂ ದಡ್ಡನಲ್ಲ, ನಂಗೂ ಅನುಭವ ಇದೆ. ಅವರಿಂದ ನಾನೇನೂ ಕಲಿಯಬೇಕಾಗಿಲ್ಲ. ಮುಂದೆ ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನೇ ಬರೆಯುವೆ ಎಂದು ಮಾತಲ್ಲೇ ಛಾಟಿ ಬೀಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಉತ್ತಮ ವಾಗ್ಮಿ, ದೇವೇಂದ್ರಪ್ಪಗೆ ಓದು, ಬರಹ ಬರಲ್ಲ ಎಂದು ಕೈ ನಾಯಕರು ಹೇಳುತ್ತಿದ್ರೆ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಅನ್ನೋ ಮೂಲಕ ಬಿಜೆಪಿ ಅಭ್ಯರ್ಥಿ ಸಹ ತಿರುಗೇಟು ನೀಡುತ್ತಿದೆ. ಹೀಗಾಗಿ ಮತದಾರರು ಓದು ಬರಹ ಬಲ್ಲವರನ್ನ ಆಯ್ಕೆ ಮಾಡ್ತಾರೋ ಅಥವಾ ಮೇಟಿ ವಿದ್ಯೆ ಅನ್ನೋರನ್ನ ಕೈ ಹಿಡಿತಾರೋ ಅನ್ನೋದು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *