ಹೊಸ ರಾಜಕೀಯ ದಾಳ ಉರುಳಿಸಲು ಮುಂದಾದ ಮಾಜಿ ಸಿಎಂ..!

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಸಿದ್ದರಾಮಯ್ಯ ಅವರು ತಮ್ಮ ಶಿಷ್ಯ ಸತೀಶ್ ಜಾರಕಿಹೊಳಿ ಮೂಲಕ ಹೊಸ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದು, ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸೆಳೆಯಲು ಸತೀಶ್ ಜಾರಕಿಹೊಳಿಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗಾವಿಯಲ್ಲಿ ಎರಡು ಲೋಕಸಭೆ ಕ್ಷೇತ್ರಗಳಿವೆ. ಆದರೆ ಈ ಬಾರಿ ಚಿಕ್ಕೋಡಿಯಿಂದ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿದೆ. ಹೀಗಾಗಿ ಕತ್ತಿ ಕುಟುಂಬವೂ ಕೂಡ ಬಿಜೆಪಿಯೊಂದಿಗೆ ಅಸಮಾಧಾನ ಹೊಂದಿದೆ. ಈ ಸಂದರ್ಭವನ್ನು ದಾಳವಾಗಿ ಉರುಳಿಸಿಕೊಂಡು ಅವರನ್ನು ಕಾಂಗ್ರೆಸ್ಸಿಗೆ ಏಕೆ ಕರೆತರಬಾರದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಶುರುವಾಗಿದೆ.

ಈಗಾಗಲೇ ಬೆಳಗಾವಿಯಲ್ಲಿ ವಿರುಪಾಕ್ಷ ಸಾದನವರ್ ಹಾಗೂ ಚಿಕ್ಕೋಡಿಗೆ ಪ್ರಕಾಶ್ ಹುಕ್ಕೇರಿಗೆ ಬಿ- ಫಾರಂ ನೀಡಲಾಗಿದೆ. ಈಗ ಇಬ್ಬರು ಅಭ್ಯರ್ಥಿಗಳನ್ನು ಕೂರಿಸಿ ಮಾತುಕತೆ ನಡೆಸಿ ಟಿಕೆಟ್ ತ್ಯಾಗ ಮಾಡಲು ಒಪ್ಪಿಸಿದ್ದಾರೆ. ರಮೇಶ್ ಕಾಂಗ್ರೆಸ್ಸಿಗೆ ಬಂದರೆ ಚಿಕ್ಕೋಡಿಯಿಂದ ರಮೇಶ್ ಕತ್ತಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಈ ಜವಾಬ್ದಾರಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸತೀಶ್ ಜಾರಕಿಹೊಳಿಗೆ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಕಾಶ್ ಹುಕ್ಕೇರಿ ಅವರು ಕೂಡ ಕಳೆದ ಬಾರಿ ಚಿಕ್ಕೋಡಿಯಿಂದ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ಈ ಬಾರಿಯೂ ಅಲ್ಲಿಯೇ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಆದರೆ ಪಕ್ಷದ ಸೂಚನೆ ಮೇರೆಗೆ ಅಲ್ಲಿಯೇ ಅನಿವಾರ್ಯವಾಗಿ ನಿಂತಿದ್ದಾರೆ. ಚಿಕ್ಕೋಡಿಯ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನ ಮಾಡಿದ್ದಾರೆ.

ಒಂದು ವೇಳೆ ಕತ್ತಿ ಸಹೋದರರು ಕಾಂಗ್ರೆಸ್ಸಿಗೆ ಬಂದರೆ ಸುಲಭವಾಗಿ ಚಿಕ್ಕೋಡಿ ಗೆಲ್ಲಬಹುದು. ಇತ್ತ ಕತ್ತಿ ಸಹೋದರರ ನೆರವಿನೊಂದಿಗೆ ಬೆಳಗಾವಿಯಲ್ಲೂ ಗೆಲುವಿನ ಬಾವುಟ ಹಾರಿಸಬಹುದು ಅನ್ನೋದು ಕೈ ಪಾಳಯದ ಲೆಕ್ಕಾಚಾರವಾಗಿದೆ. ರಮೇಶ್ ಕತ್ತಿಗೆ ಚಿಕ್ಕೋಡಿ ಬಿಟ್ಟುಕೊಟ್ಟು ಬೆಳಗಾವಿಯಿಂದ ಸ್ಪರ್ಧಿಸಲು ಪ್ರಕಾಶ್ ಹುಕ್ಕೇರಿ ಸಮ್ಮತಿ ನೀಡಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *