ಬಿದ್ದರೂ ಹಠ ಬಿಡದೆ ಮತ್ತೆ ಕುದುರೆ ಏರಿ ರೇಸ್ ಗೆದ್ದ 9ರ ಪೋರ!

Public TV
1 Min Read

ಬೆಳಗಾವಿ (ಚಿಕ್ಕೋಡಿ): ಕುದುರೆ ರೇಸ್ ಸಂದರ್ಭದಲ್ಲಿ ದಾರಿ ಮಧ್ಯ ಕೆಳಗೆ ಬಿದ್ದ 9ರ ಪೋರ, ಮತ್ತೆ ಕುದುರೆ ಏರಿ ಗೆಲುವು ಸಾಧಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ ಬಾಲಕನ ಸಾಹಸದ ಕುರಿತು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕುದುರೆಯ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಾಲಕನ ಸಾಹಸಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದು, ಬೆಳಗಾವಿಯ ಮಗಧೀರ ಎಂದು ಹೊಗಳಿದ್ದಾರೆ.

ಕೆರೂರು ಗ್ರಾಮದ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಕುದುರೆ ರೇಸ್ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಯುವಕರು ಕುದುರೆ ತೆಗೆದುಕೊಂಡು ಬಂದಿದ್ದರು. ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ ಬಾಲಕ ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದ.

ವಿಡಿಯೋದಲ್ಲಿ ಏನಿದೆ?:
ಕುದುರೆ ರೇಸ್‍ನಲ್ಲಿ ಲೋಕೇಶ ಎಲ್ಲರಿಗಿಂತ ಮುಂದೆಯಿದ್ದ. ಆದರೆ ದಾರಿ ಮಧ್ಯದಲ್ಲಿ ಕುದುರೆ ಕಾಲು ಜಾರಿಗೆ ನೆಲಕ್ಕೆ ಬಿತ್ತು. ಪರಿಣಾಮ ಲೋಕೇಶ ಕೂಡ ಕುದುರೆಯ ಮೇಲಿಂದ ಭಾರೀ ದೂರದಲ್ಲಿ ಬಿದ್ದ. ಹಿಂದೆ ಬರುತ್ತಿದ್ದ ಮತ್ತೊಬ್ಬ ಸ್ಪರ್ಧಿ ಲೋಕೇಶನನ್ನು ಹಿಂದಿಕ್ಕಿದ್ದ. ಆದರೆ ಕುದುರೆ ಕಡಿಮೆ ಸಮಯದಲ್ಲಿ ಚೇತರಿಸಿಕೊಂಡು ಏಕಾಂಗಿಯಾಗಿ ಓಡಲು ಆರಂಭಿಸಿತ್ತು. ಲೋಕೇಶನನ್ನು ಪ್ರೋತ್ಸಾಹಿಸಿದ ಬೈಕ್ ಸವಾರರು ಆತನನ್ನು ಕರೆದುಕೊಂಡು ಬಂದು ಓಡುತ್ತಿದ್ದ ಕುದುರೆಯ ಮೇಲೆ ಮತ್ತೆ ಕೂರಿಸಿದರು. ಬಳಿಕ ಬಾಲಕ ಲೋಕೇಶ ಯಶಸ್ವಿಯಾಗಿ ಗುರಿ ಮುಟ್ಟಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *