10 ಕೋಟಿ ಉದ್ಯೋಗದ ಭರವಸೆ ನೀಡಿ ಮೋದಿಯಿಂದ ನಾಮ: ಸಿದ್ದರಾಮಯ್ಯ

Public TV
1 Min Read

ಮೈಸೂರು: ಬಿಜೆಪಿಯವರಿಗೆ ಮೋದಿ ಬಿಟ್ಟು ಬೇರೆ ಏನಿಲ್ಲ. ಅವರಿಗೆ ಮೋದಿ ಮುಖವೇ ಬಂಡವಾಳ. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಇವರಿಗೆಲ್ಲ ಯಾವ ವರ್ಚಸ್ಸು ಇದೆ ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಮೋದಿ ಎನ್ನುತ್ತಿರಲ್ಲ ಅವರೇನು ಅಭಿವೃದ್ಧಿ ಮಾಡಿದ್ದಾರೆ? 10 ಕೋಟಿ ಉದ್ಯೋಗದ ಭರವಸೆ ನೀಡಿ ನಾಮ ಹಾಕಿದ್ದಾರೆ. ಮೊದಲು ಮೋದಿಗೂ ಯಾವುದೇ ವರ್ಚಸ್ಸು ಇರಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಮಾಡಿರುವುದನ್ನು ಹೇಳಿಕೊಂಡು ಈಗ ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಕಾಲದಲ್ಲೂ 10-12 ಸರ್ಜಿಕಲ್ ಸ್ಕ್ರೈಕ್ ಆಗಿದೆ. ನಾವು ಅದನ್ನು ಹೇಳಿಕೊಂಡಿಲ್ಲ. ಬಿಜೆಪಿ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ. ಆದ್ದರಿಂದ ಬೇರೆಯವರ ಹೆಸರನ್ನು ತಮ್ಮ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಇವರಿಗೆಲ್ಲ ಜನರ ಬೆಂಬಲ ಗಳಿಸಲು ಮೋದಿ ಮುಖವೇ ಬಂಡವಾಳ. ಆದರೆ ಕಾಂಗ್ರೆಸ್ಸಿನಲ್ಲಿ ಹಾಗಿಲ್ಲ. ನಮ್ಮಲ್ಲಿ ರಾಜ್ಯ ನಾಯಕರಿಗೂ ಬಂಡವಾಳವಿದೆ, ರಾಹುಲ್ ಗಾಂಧಿಗೂ ಇದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಎಲ್ಲಿದೆ ಮೋದಿ ಅಲೆ? ಕರ್ನಾಟಕಕ್ಕೆ ಮೋದಿ ಏನು ಮಾಡಿದ್ದಾರೆ? ಅವರಿಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಸಂವಿಧಾನವನ್ನೇ ಬದಲಾಯಿಸುತ್ತೇವೆ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ. ಇವರ ಕೈಯಲ್ಲಿ ಸಂವಿಧಾನ ಸುರಕ್ಷಿತವಾಗಿರುತ್ತಾ? ಸಂವಿಧಾನದಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು, ಅವಕಾಶ ನೀಡಬೇಕು ಅಂತ ಇದೆ. ಆದ್ರೆ ಇದಕ್ಕೆ ವಿರುದ್ಧವಾಗಿ ಬಿಜೆಪಿ ಅವರು ಇದ್ದಾರೆ. ರೈತರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗದವರು ಸೇರಿದಂತೆ ಯಾರಿಗೂ ಕೆಲಸ ಮಾಡದೇ ಬೆಜೆಪಿಗೆ ಹೇಗೆ ಬೆಂಬಲ ಸಿಗುತ್ತೆ ಎಂದು ಪ್ರಶ್ನಿಸಿ ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *