2 ವರ್ಷಗಳ ಹಿಂದೆ ಉಗ್ರರಿಗೆ ಬಲಿಯಾದ ಪುತ್ರ- ಕೋಲಾರದಲ್ಲಿ ಹೆತ್ತವರ ಕಣ್ಣೀರ ಕಥನ

Public TV
1 Min Read

– ರಾಯಚೂರಲ್ಲಿ ಗಂಡನ ನೆನಪೇ ಪತ್ನಿಯ ಜೀವನ

ಕೋಲಾರ/ರಾಯಚೂರು: ಉಗ್ರನ ದಾಳಿಗೆ ಬಲಿಯಾದ ನಮ್ಮ ಹೆಮ್ಮೆಯ ವೀರ ಯೋಧರಿಗಾಗಿ ಕಳೆದ 3 ದಿನಗಳಿಂದ ಇಡೀ ದೇಶವೇ ಮರುಗುತ್ತಿದೆ. ಹೀಗಿರುವಾಗ ಇಂಥದ್ದೇ ಒಂದು ಘಟನೆಯಲ್ಲಿ 2 ವರ್ಷಗಳ ಹಿಂದೆ ತನ್ನ ಮಗನನ್ನು ಕಳೆದುಕೊಂಡಿರೋ ಯೋಧನ ಕುಟುಂಬವೊಂದು ಅನ್ನ, ನೀರು ಬಿಟ್ಟು ಕಣ್ಣೀರಾಕುತ್ತಿದೆ.

ಹೌದು. ಕೋಲಾರದ ಕಿತ್ತಂಡೂರು ಗ್ರಾಮದಲ್ಲಿ ಕೈಯಲ್ಲಿ ದೇಶಕ್ಕಾಗಿ ಪ್ರಾಣಕೊಟ್ಟ ಮಗನ ಫೋಟೋ ಹಿಡಿದುಕೊಂಡು ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. 2016ರ ಆಗಸ್ಟ್ 5ರಂದು ಕಿತ್ತಂಡೂರು ಗ್ರಾಮದ ಸಿಆರ್‍ಪಿಎಫ್ ಯೋಧ ರಾಜೇಶ್ ಅಸ್ಸಾಂ ಹಾಗೂ ತ್ರಿಪುರಾ ಗಡಿಯ ದಲಾಯಿ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾಗಿದ್ದರು. ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿ ತೆರಳಿದ್ದ ಮಗ ಮನೆಗೆ ಬರಲೇ ಇಲ್ಲ. ಅಂದಿನಿಂದ ಜನ್ಮಕೊಟ್ಟ ಜೀವಗಳಿಗೆ ನೆನಪೊಂದೇ ಆಧಾರವಾಗಿದೆ.


ಈಗ 40 ಯೋಧರ ವೀರಮರಣದಿಂದ ಈ ತಂದೆ-ತಾಯಿ ಮತ್ತಷ್ಟು ನೊಂದಿದ್ದಾರೆ. 3 ದಿನಗಳಿಂದ ಅನ್ನ, ನೀರು ಬಿಟ್ಟು ಮಗನ ನೆನಪಲ್ಲೇ ಕಣ್ಣೀರು ಹಾಕ್ತಿದ್ದಾರೆ. ಅಲ್ಲದೆ ಪಾಕಿಸ್ತಾನದ ದುಷ್ಟ ಬುದ್ಧಿಗೆ ಬ್ರೇಕ್ ಹಾಕ್ಬೇಕು, ಉಗ್ರರನ್ನು ಸರ್ವನಾಶ ಮಾಡ್ಬೇಕು ಅಂತಾ ರಾಜೇಶ್ ಹೆತ್ತಮ್ಮ ಆಗ್ರಹಿಸಿದ್ದಾರೆ.

ಇತ್ತ ರಾಯಚೂರಲ್ಲಿ ಇನ್ನೊಂದು ಕರುಣಾಜನಕ ಸುದ್ದಿ ಇದೆ. 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ರಾಯಚೂರಿನ ಯಕ್ಲಾಸಪುರದ ವೀರಯೋಧ ಬಸವರಾಜಪ್ಪ ಹುತಾತ್ಮರಾಗಿದ್ರು. ಆಗ ಅವರ ಪತ್ನಿ ಮಲ್ಲಮ್ಮಗೆ ಕೇವಲ 18 ವರ್ಷ. ಮದುವೆಯಾಗಿ ಒಂದೇ ತಿಂಗಳಿಗೆ ಪತಿಯನ್ನ ಕಳೆದುಕೊಂಡ ಮಲ್ಲಮ್ಮ ಕಳೆದ 48 ವರ್ಷಗಳಿಂದ ಪತಿಯ ನೆನಪಿನಲ್ಲೇ ಏಕಾಂಗಿಯಾಗಿ ಬದುಕ್ತಿದ್ದಾರೆ. ದೇಶಕ್ಕಾಗಿ ಮಡಿದ ಪತಿಯ ಮುಂದೆ ನನ್ನ ತ್ಯಾಗ ದೊಡ್ಡದಲ್ಲ ಎಂದು ಮಲ್ಲಮ್ಮ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ವೀರ ಯೋಧರ ತ್ಯಾಗ-ಬಲಿದಾನಗಳು ಎಂದೆಂದಿಗೂ ವ್ಯರ್ಥವಲ್ಲ ಅದು ದೇಶದ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿರುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *