ಮಗು ಆಗದ್ದಕ್ಕೆ ಮನನೊಂದು ಗೃಹಿಣಿ ನೇಣಿಗೆ ಶರಣು!

Public TV
1 Min Read

ಬೆಂಗಳೂರು: ಮಗು ಆಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನನೊಂದು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲಸೂರು ಬಳಿ ನಡೆದಿದೆ.

ಸಂಗೀತಾ(23) ಮೃತ ಗೃಹಿಣಿ. ಹಲಸೂರು ಗೇಟ್ ಬಳಿ ಇರುವ ಸಂಗಲ್ ಪೇಟೆಯ ಮನೆಯಲ್ಲಿ ಬುಧವಾರ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐದು ವರ್ಷಗಳ ಹಿಂದೆ ಕೊಲ್ಕತ್ತಾದಲ್ಲಿ ಸಂಗೀತ ನಬೀತ್ ಎಂಬಾತನನ್ನು ವಿವಾಹವಾಗಿದ್ದರು. ಬಳಿಕ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ದಂಪತಿ ವಾಸಿಸುತ್ತಿದ್ದರು. ವಿವಾಹವಾಗಿ ಐದು ವರ್ಷ ಕಳೆದರೂ ನಬೀತ್ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಸಂಗೀತಾ ಬಹಳ ನೊಂದಿದ್ದರು.

ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಮನೆಯ ಅಕ್ಕಪಕ್ಕದವರು ಹಾಗೂ ಸಂಬಂಧಿಕರು ಸಂಗೀತಾ ಅವರನ್ನು ಪ್ರಶ್ನೆ ಮಾಡುತ್ತಿದ್ದರು. ಮೊದಲೇ ಮಕ್ಕಳಿಲ್ಲದ ಕೊರಗಿನಲ್ಲಿದ್ದ ಸಂಗೀತಾ ನೆರೆಹೊರೆಯವರ ಪ್ರಶ್ನೆಗಳಿಂದ ಬೇಸತ್ತುಹೋಗಿದ್ದರು. ಹೀಗಾಗಿ ಪತಿ ಮನೆಯಲ್ಲಿರದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿಯನ್ನು ವಿಚಾರಿಸಿದಾಗ ನಮ್ಮ ನಡುವೆ ಯಾವುದೇ ಗಲಾಟೆ ಇರಲಿಲ್ಲ. ಪತ್ನಿ ಮಗು ಆಗದೇ ವಿಚಾರಕ್ಕೆ ನೊಂದಿದ್ದಳು. ನೆರೆ ಹೊರೆಯವರು ಪದೇ ಪದೇ ಪ್ರಶ್ನಿಸುತ್ತಿದ್ದರಿಂದ ಸಂಗೀತಾ ನೊಂದು ಹೋಗಿದ್ದಳು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *