– ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಇನ್ನೊಂದು ಶನಿ
ಮಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರು ಪ್ರಾಣ ಹೋದರೂ ಆಪರೇಷನ್ ಕಮಲ ಮಾಡುವುದನ್ನು ಬಿಡಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಟೀಕಿಸಿದ್ದಾರೆ.
ಬಿಜೆಪಿಯ ಆಪರೇಷನ್ ಕಮಲ ಆಡಿಯೋ ವಿಚಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಒಪ್ಪಲಿ, ಬಿಡಲಿ ತನಿಖೆ ಆಗಲೇಬೇಕು. ಕಾಂಗ್ರೆಸ್ ತಪ್ಪು ಮಾಡಿದರೂ ಸತ್ಯಾಂಶ ಹೊರಬರಲಿ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯಲಿ. ದೂರು ನೀಡಿಯೇ ತನಿಖೆ ಆಗಬೇಕೆಂದೇನಿಲ್ಲ. ಎಲ್ಲರಲ್ಲೂ ಒಂದು ಸಂಶಯವಿದೆ, ಅದು ನಿವಾರಣೆಯಾಗಲಿ. ಬಿಜೆಪಿಯವರು ಯಾವ ತನಿಖೆಗೆ ಒತ್ತಾಯಿಸುತ್ತಾರೆ ಅದು ಆಗಲಿ. ಜನತೆಗೆ ಸತ್ಯಾಂಶ ತಿಳಿಸೋದು ಶಾಸಕರ, ಸರಕಾರದ ಕರ್ತವ್ಯ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಸ್ಪೀಕರ್ ಹಾಗೂ ಸದನದ ನಿರ್ಣಯದ ಮೇಲೆ ಏನೆಂದು ಸರ್ಕಾರ ತೀರ್ಮಾನ ಕೈಗೊಳ್ಳಲಿ. ಪ್ರಾಣ ಹೋದರೂ ಯಡಿಯೂರಪ್ಪನವರು ಆಪರೇಷನ್ ಕಮಲ ಮಾಡುವುದು ಬಿಡಲ್ಲ. ಈ ತರಹದ ಆಪರೇಷನ್ಗಳು ಅವರಿಗೆ ಹವ್ಯಾಸವಾಗಿ ಬಿಟ್ಟಿದೆ. ಇನ್ನಾದರೂ ಆಪರೇಷನ್ ಕಮಲ ಬಿಡಲಿ. ಬಿಜೆಪಿ ಪಕ್ಷವನ್ನೇ ಅವರು ನಾಶ ಮಾಡುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲೂ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದಿದೆ. ತಕ್ಷಣ ಯಡಿಯೂರಪ್ಪ ಕ್ಷಮೆಯಾಚಿಸಲಿ ಎಂದು ಜನಾರ್ದನ ಪೂಜಾರಿ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಆಪರೇಷನ್ ಕಮಲ ಮಾಡುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಹಾಗೆಯೇ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಬೆಂಬಲ ಆರೋಪ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಇನ್ನೊಂದು ಶನಿ. ಅವರಿಗೆ ಯಾವಾಗ ಬುದ್ಧಿ ಬರುತ್ತೋ ಪರಮಾತ್ಮನಿಗೆ ಗೊತ್ತು ಎಂದು ಕಿಡಿಕಾರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv