ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

Public TV
2 Min Read

ಬೆಂಗಳೂರು: ಆಪರೇಷನ್ ಕಮಲ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ಸಿಡಿಸಿರುವ ಆಡಿಯೋ ಕುರಿತು ಮುಖ್ಯಮಂತ್ರಿಗಳು ಇಂದು ಎಸ್‍ಐಟಿ ತನಿಖೆಗೆ ನಡೆಸುವುದಾಗಿ ತಿಳಿಸಿದ್ದು, ಈ ಕ್ರಮಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಶೇಷ ತನಿಖಾ ದಳಕ್ಕೆ ಪ್ರಕರಣದ ತನಿಖೆ ಒಪ್ಪಿಸುವುದರ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವ ಹಿಂದೆ ಕಾರಣವೂ ಇದ್ದು, ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಅಧಿಕಾರಿಗಳೆ ತನಿಖೆ ನಡೆಸುವುದಿಂದ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ಸ್ಪೀಕರ್ ಎದುರು ತಿಳಿಸಿದೆ. ಒಂದೊಮ್ಮೆ ಸ್ಪೀಕರ್ ಬಿಜೆಪಿ ನಾಯಕರ ಮಾತಿಗೆ ಮಾನ್ಯತೆ ನೀಡದೆ ಎಸ್‍ಐಟಿ ತನಿಖೆಗೆ ಒಪ್ಪಿಸಿದರೆ ಹೇಗಲ್ಲಾ ತನಿಖೆ ನಡೆಯುತ್ತದೆ ಎಂಬ ಮಾಹಿತಿ ಇಂತಿದೆ.

ತನಿಖೆ ಹೇಗೆ ನಡೆಯುತ್ತದೆ?:
ಎಸ್‍ಐಟಿ ಅಧಿಕಾರಿಗಳು ಆಪರೇಷನ್ ಆಡಿಯೋ ಕುರಿತು ತನಿಖೆ ನಡೆಸಲು ಅವಕಾಶ ಪಡೆದರೆ ಮೊದಲು ಎಫ್‍ಐಆರ್ ದಾಖಲು ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಹೇಗೆ ತನಿಖೆ ನಡೆಸುತ್ತಾರೋ ಹಾಗೆಯೇ ಎಸ್‍ಐಟಿ ತನಿಖೆಯೂ ಆರಂಭವಾಗುತ್ತದೆ. ಇದರೊಂದಿಗೆ ಕ್ರಿಮಿನಿನಲ್ ಪ್ರಕರಣದ ರೀತಿ ತನಿಖೆ ನಡೆಯುವ ಅವಕಾಶಗಳಿದ್ದು, ಎಫ್‍ಐಆರ್ ದಾಖಲಾದ ಬಳಿಕ ಡೀಲ್ ನಡೆದಿದೆ ಎನ್ನಲಾದ ಸ್ಥಳದ ಮಹಜರು ಕಾರ್ಯವನ್ನು ಎಸ್‍ಐಟಿ ತಂಡ ಮಾಡಲಿದೆ.

ತನಿಖೆಗೂ ಮುನ್ನವೇ ಶಾಸಕ ನಾಗನಗೌಡ ಪುತ್ರ ಶರಣಗೌಡರ ಹೇಳಿಕೆ ಸಂಗ್ರಹ ಮಾಡಬಹುದಾಗಿದ್ದು, ಆಡಿಯೋವನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ದಾಖಲೆ ಸಂಗ್ರಹ ಮಾಡಲಾಗುತ್ತದೆ. ಜೊತೆಗೆ ಆಡಿಯೋ ಕುರಿತು ಯಾರೆಲ್ಲಾ ಹೆಸರು ಪ್ರಸ್ತಾಪ ಆಗಿದೆಯೋ ಅವರಿಗೆಲ್ಲಾ ಕೂಡ ನೋಟಿಸ್ ನೀಡಲಾಗುತ್ತದೆ. ನಂತರದಲ್ಲಿ ವಶಕ್ಕೆ ಪಡೆದ ಆಡಿಯೋ ದಾಖಲೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮುನ್ನ (ಎಫ್‍ಎಸ್‍ಎಲ್) ವಾಯ್ಸ್ ಸ್ಯಾಂಪಲ್ ಪಡೆಯುವ ಸಾಧ್ಯತೆ ಇದ್ದು, ಈ ವೇಳೆ ವಾಯ್ಸ್ ಸ್ಯಾಂಪಲ್ ನೀಡಲು ಒಪ್ಪಿಗೆ ನೀಡದಿದ್ದರೆ ಬಂಧನ ಮಾಡಲು ಕೂಡ ಅವಕಾಶವಿದೆ.

ಒಂದೊಮ್ಮೆ ಎಫ್‍ಎಸ್‍ಎಲ್ ವರದಿ ಬಂದರೆ ಆ ವರದಿಯನ್ನು ಆಧರಿಸಿ ಬಂಧನ ನಡೆಸುವ ಸಾಧ್ಯತೆ ಇದ್ದು, ಯಾರನ್ನಾದರೂ ಕೂಡ ಬಂಧಿಸುವ ಅವಕಾಶವಿದೆ. ಅಲ್ಲದೇ ಪ್ರಕರಣದಲ್ಲಿ ಸ್ಪೀಕರ್ ಹಾಗೂ ನ್ಯಾಯಮೂರ್ತಿಗಳ ಹೆಸರು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸುವ ಹಾಗು 50/25 ಕೋಟಿ ರೂ. ಪ್ರಸ್ತಾಪ ಆಗಿರುವ ಕಾರಣ ಅದಾಯ ತೆರಿಗೆ ಇಲಾಖೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ)ಗೆ ತನಿಖೆ ನಡೆಸಲು ಸೂಚಿಸಬಹುದಾಗಿದೆ. ಅಲ್ಲದೇ ಎಸ್‍ಐಟಿ ನೀಡಲಿರುವ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೂ ಸಲ್ಲಿಕೆ ಮಾಡಬಹುದು.

ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರು ಕೂಡ ಆಡಿಯೋ ರೆಕಾರ್ಡ್ ಮಾಡಲು ನಾನು ಸೂಚನೆ ನೀಡಿದ್ದೇ ಎಂದು ಹೇಳಿದ ಮಾತಿನ ಅನ್ವಯ ಎಚ್‍ಡಿಕೆ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಬಹುದಾಗಿದೆ. ತನಿಖೆಯ ವೇಳೆ ಪ್ರಕರಣ ದಾಖಲಾದ ಬಳಿಕ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಬಂಧನ ಸಾಧ್ಯತೆ ಇದ್ದು, ತನಿಖೆಗೆ ಸಹಕಾರ ನೀಡದಿದ್ದರೆ ಬಿಎಸ್ ಯಡಿಯೂರಪ್ಪ ಅವರನ್ನು ಕೂಡ ಬಂಧಿಸುವ ಸಾಧ್ಯತೆ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *