ಸಿದ್ದರಾಮಯ್ಯ ಗಲಾಟೆ ಮಾಡಿಸುವ ರಿಂಗ್ ಮಾಸ್ಟರ್ – ಶೋಭಾ ಕರಂದ್ಲಾಜೆ

Public TV
1 Min Read

ಉಡುಪಿ: ಏಳು ತಿಂಗಳಿನಿಂದ ಸಮ್ಮಿಶ್ರ ಸರ್ಕಾರ ತೆವಳುತ್ತಾ ಸಾಗುತ್ತಿದೆ. ಕಾಂಗ್ರೆಸ್ ಜೆಡಿಎಸ್ ಜಗಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ರಿಂಗ್ ಮಾಸ್ಟರ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಒಂದಿಲ್ಲೊಂದು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇದಕ್ಕೆ ಕಾರಣ. ಅವರೇ ಮೈತ್ರಿ ಸರ್ಕಾರದಲ್ಲಿ ಆಗುತ್ತಿರುವ ಗಲಾಟೆಗಳಿಗೆ ರಿಂಗ್ ಮಾಸ್ಟರ್ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಬಂದು ಏಳು ತಿಂಗಳು ಕಳೆದರೂ ಸರ್ಕಾರ ತೆವಳುತ್ತಾ ಸಾಗುತ್ತಿದೆ. ಕಾಂಗ್ರೆಸ್ ಒಳಗೆ ಆಂತರಿಕ ಜಗಳ ನಡೆಯುತ್ತಿದೆ. ಕಾಂಗ್ರೆಸ್ ಜೆಡಿಎಸ್ ವೈಮನಸ್ಸಿಗೂ ಸಿದ್ದರಾಮಯ್ಯನವರೇ ಕಾರಣ. ಸಿದ್ದರಾಮಯ್ಯನವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಆಸೆ ಶುರುವಾಗಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿಯವರ ಕಾಲೆಳೆಯುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಕುಟುಕಿದರು. ಇದನ್ನೂ ಓದಿ: ಅನಿವಾರ್ಯವಾಗಿ ಶರಣಾಗಿದ್ದೇವೆ, ಕಳೆದ 20 ವರ್ಷಗಳಲ್ಲಿ ದಿ ಬೆಸ್ಟ್ ಸಿಎಂ ಅಂದ್ರೆ ಸಿದ್ದರಾಮಯ್ಯ: ರಾಯರೆಡ್ಡಿ

ಸಿದ್ದರಾಮಯ್ಯ ಅವರು ತಮ್ಮ ಶಾಸಕರನ್ನು ಎತ್ತಿಕಟ್ಟಿ ಜಗಳ ಎಬ್ಬಿಸುತ್ತಿದ್ದಾರೆ. ರಾಜ್ಯ ಸರ್ಕಾರವನ್ನು ಬೀಳಿಸಲು ಸಿದ್ದರಾಮಯ್ಯರಿಂದ ಯತ್ನ ನಡೆಯುತ್ತಿದ್ದು, ಆ ಆರೋಪವನ್ನು ಬಿಜೆಪಿಯ ಮೇಲೆ ಹೊರಿಸಲಾಗುತ್ತಿದೆ. ಈ ನಡುವೆ ಸಿಎಂ ಕುಮಾರಸ್ವಾಮಿ ಅಸಹಾಯಕತೆ ಹೊರಹಾಕಿ ಸಹಾನುಭೂತಿ ಗಿಟ್ಟಿಸಲು ಅಧಿಕಾರದಿಂದ ಇಳಿಯುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸಂಕ್ರಾಂತಿಯ ಮಹಾಕ್ರಾಂತಿ ವಿಫಲ ಬೆನ್ನಲ್ಲೆ ಆಪರೇಷನ್ ಮೌನ ಕ್ರಾಂತಿ ಆರಂಭ!

ಮೈಸೂರಿನಲ್ಲಿ ಮಹಿಳೆ ಮೇಲೆ ಸಿದ್ದರಾಮಯ್ಯ ಗರಂ ಆಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರ ಮೇಲೂ ಸಿದ್ದರಾಮಯ್ಯ ಅವರಿಗೆ ವಿಶ್ವಾಸವಿಲ್ಲ. ಮಹಿಳೆಯರ ಬಗ್ಗೆ ಗೌರವ ಇಲ್ಲ. ಚಾಮುಂಡೇಶ್ವರಿಯಲ್ಲಿ ಸೋತ ಮೇಲೆ ಅವರು ಹತಾಶರಾಗಿದ್ದಾರೆ. ಮೈಸೂರಿಗೆ ಹೋದಾಗೆಲ್ಲ ಸಿಟ್ಟು, ಜಗಳ ಮಾಡ್ತಾರೆ. ಪ್ರಜಾತಂತ್ರ ವ್ಯವಸ್ಥೆ ಮೇಲೆ ಅವರಿಗೆ ವಿಶ್ವಾಸವಿಲ್ಲ ಎಂದು ಕರಂದ್ಲಾಜೆ ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *