ಹಿರಿಯ ಆಟಗಾರನಿಗೆ ಖಾಲಿ ಚೆಕ್ ನೀಡಿ ಮಾನವೀಯತೆ ಮೆರೆದ ಕೃನಾಲ್ ಪಾಂಡ್ಯ

Public TV
2 Min Read

ವಡೋದರಾ: ವೆಂಟಿಲೇಟರ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಜೇಕಬ್ ಮಾರ್ಟಿನ್ ನೆರವಿಗೆ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಧಾವಿಸಿದ್ದಾರೆ.

ಡಿಸೆಂಬರ್ 28 ರಂದು ನಡೆದ ರಸ್ತೆ ಅಪಘಾತದಿಂದಾಗಿ ಶ್ವಾಸಕೋಶ ಮತ್ತು ಲಿವರ್ ಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೇಕಬ್ ಮಾರ್ಟಿನ್ ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ.

ಈಗಾಗಲೇ ಬಿಸಿಸಿಐ 5 ಲಕ್ಷ ರೂ. ನೀಡಿದ್ದರೆ ಬರೋಡಾ ಕ್ರಿಕೆಟ್ ಸಂಸ್ಥೆ 3 ಲಕ್ಷ ರೂ. ನೀಡಿದೆ. ಸೌರವ್ ಗಂಗೂಲಿ ಸೇರಿದಂತೆ ಹಲವು ಕ್ರಿಕೆಟಿಗರು ಮಾರ್ಟಿನ್ ಅವರಿಗೆ ಸಹಾಯ ಮಾಡಿದ್ದಾರೆ. ಈಗ ಕೃನಾಲ್ ಪಾಂಡ್ಯ ಸಹ ಸಹಾಯ ಹಸ್ತ ಚಾಚಿದ್ದಾರೆ.

ಈ ಸಂಬಂಧ ಖಾಲಿ ಚೆಕ್ ನೀಡಿದ ಕೃನಾಲ್, ಎಷ್ಟು ಹಣ ಬೇಕಾದರೂ ಬರೆದುಕೊಳ್ಳಿ, ಆದರೆ ಯಾವುದೇ ಕಾರಣಕ್ಕೂ 1 ಲಕ್ಷ ರೂ. ಗಿಂತ ಕಡಿಮೆ ಮೊತ್ತವನ್ನು ಈ ಚೆಕ್ ನಲ್ಲಿ ಬರೆಯಬೇಡಿ ಎಂದು ಹೇಳಿದ್ದಾರೆ.

ಆರಂಭದಲ್ಲಿ ಮಾಜಿ ಆಟಗಾರ ಮತ್ತು ಹಾಲಿ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆಗಿರುವ ಸಂಜಯ್ ಪಟೇಲ್ ಸಹಾಯಹಸ್ತ ಚಾಚಿದ್ದು ಈಗ ಗಂಗೂಲಿ, ರವಿಶಾಸ್ತ್ರಿ ಸೇರಿದಂತೆ ಹಲವು ಮಂದಿ ಆರ್ಥಿಕ ಸಹಾಯ ಮಾಡಿದ್ದಾರೆ.

ಮಾರ್ಟಿನ್ ಕುಟುಂಬ ಈಗ ಕಷ್ಟದಲ್ಲಿದ್ದು, ಎಷ್ಟು ಹಣ ಬೇಕೆಂದು ಕೇಳುವ ಪರಿಸ್ಥಿತಿಯಲ್ಲಿ ಅವರಿಲ್ಲ. ಹೀಗಾಗಿ ಅವರ ಕಷ್ಟಕ್ಕೆ ಕ್ರಿಕೆಟ್ ಸದಸ್ಯರು ಸಹಾಯ ಮಾಡುತ್ತಿದ್ದಾರೆ ಎಂದು ಸಂಜಯ್ ಪಟೇಲ್ ತಿಳಿಸಿದರು.

1972 ಮೇ 11 ರಂದು ಗುಜರಾತಿನ ಬರೋಡಾದಲ್ಲಿ ಜನಿಸಿದ ಬಲಗೈ ಬ್ಯಾಟ್ಸ್ ಮನ್ ಜೇಕಬ್ ಮಾರ್ಟಿನ್ 1999ರಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, 22.57 ಸರಾಸರಿಯಲ್ಲಿ ಒಟ್ಟು 158 ರನ್ ಗಳಿಸಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ 5 ಪಂದ್ಯ ಸಚಿನ್ ನಾಯಕತ್ವದಲ್ಲಿ ಮಾರ್ಟಿನ್ 5 ಪಂದ್ಯಗಳನ್ನು ಆಡಿದ್ದರು.

2011ರಲ್ಲಿ ಮಾನವ ಕಳ್ಳ ಸಾಗಾಣೆ ಆರೋಪದಡಿಯಲ್ಲಿ ದೆಹಲಿ ಪೊಲೀಸರು ಜೇಕಬ್ ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಬರೋಡದ ವಿವಿಧ ವಯೋಮಿತಿ ತಂಡಗಳಿಗೆ ತರಬೇತಿ ನೀಡುತ್ತಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *