ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

Public TV
2 Min Read

ತುಮಕೂರು: ನಡೆದಾಡುವ ದೇವರು, ಕಲಿಯುಗದ ಬಸವಣ್ಣ ಶತಾಯುಷಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ತುಮಕೂರು ಸಿದ್ದಗಂಗಾ ಮಠದತ್ತ ಹರಿದು ಬರುತ್ತಿದ್ದು, ಭಕ್ತರಿಗಾಗಿ ಅಚ್ಚುಕಟ್ಟಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ತಪ್ಪಬಾರದು. ತಡವಾದರೂ ದಾಸೋಹ ಸಿಗದೇ ಭಕ್ತರು ತೆರಳಬಾರದು ಎಂದು ಹೇಳುತ್ತಿದ್ದರು. ನಡೆದಾಡುವ ದೇವರ ಈ ವಾಕ್ಯ ಈಗಲೂ ಪಾಲನೆಯಾಗುತ್ತಿದ್ದು, ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ರಾತ್ರಿಯಿಂದಲೇ ಪ್ರಸಾದವನ್ನ ತಯಾರಿಸಿ, ಊಟದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ.  ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

ದಾಸೋಹದಲ್ಲಿ ಸಹಾಯ ಮಾಡಲು ಹಲವಾರು ಭಕ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ದೇವರ ಮೇಲಿನ ಪ್ರೀತಿಗಾಗಿ ದಾಸೋಹ ಕೇಂದ್ರಕ್ಕೆ ಬಂದು ತರಕಾರಿ ಕತ್ತರಿಸಿಕೊಟ್ಟು, ಭಕ್ತ ಸಮೂಹ ಪ್ರಸಾದ ತಯಾರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

ಸಿದ್ದಗಂಗಾ ಮಠದಲ್ಲಿ ಒಟ್ಟು 10 ಕಡೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಹೊಸ ಮಠ ದಾಸೋಹ ಭವನ ಹಾಗೂ ಹೊಸ ಮಠದ ಶ್ರೀಗಳ ಕಚೇರಿಯ ಬಳಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹೊಸ ಮಠದ ಹಿಂಭಾಗದಲ್ಲಿ 3 ಕಡೆ, ಕ್ಯಾತಸಂದ್ರ ಸರ್ಕಲ್, ಮಠದ ಹಿಂದಿನ ಗೇಟ್, ಬಂಡೇಪಾಳ್ಯ, ಶ್ರೀನಗರ ಕ್ರಾಸ್ ಹಾಗೂ ವಜ್ರಮಹೋತ್ಸವ ಕಟ್ಟಡದ ಬಳಿ ತಲಾ ಒಂದೊಂದರಂತೆ ಒಟ್ಟು 10 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

ಸಿದ್ದಗಂಗಾ ಮಠಕ್ಕೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಹೋಗಬಾರದೆಂದು ಅನ್ನದಾಸೋಹ 24 ಗಂಟೆಯಿಂದ ನಡೆಯುತ್ತಿದೆ. ಇವರೆಗೆ 2.5 ಲಕ್ಷ ಜನ ಅನ್ನ ದಾಸೋಹ ಸಹ ಪಡೆದಿದ್ದಾರೆ. ಉಪ್ಪಿಟ್ಟು, ಕೇಸರಿ ಬಾತ್, ಅನ್ನ, ಸಾಂಬರ್ ಸೇರಿದಂತೆ ಹಲವು ಪದಾರ್ಥಗಳು ಸಿದ್ಧವಾಗುತ್ತಲೇ ಇದೆ. ಸಿದ್ದಗಂಗಾ ಮಠದಲ್ಲಿ ಅಡವಿ ಶ್ರೀಗಳು ಆರಂಭಿಸಿದ ಅನ್ನ ದಾಸೋಹ ಪದ್ಧತಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು, ಇಂದು ಕೂಡ ಮುಂದುವರಿದಿದೆ.  ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

ಕೇವಲ ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರು ನಾಗರೀಕರ ವೇದಿಕೆಯಿಂದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 60 ಕಡೆ ರೈಸ್ ಮಿಲ್ ಮಾಲೀಕರ ಸಂಘ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗೆಯೇ ಜಿಲ್ಲೆಯ ಹಲವೆಡೆ ಹೋಟೆಲ್‍ಗಳ ಬಂದ್ ಹಿನ್ನಲೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು ಹಾಗು ಸಂಘ, ಸಂಸ್ಥೆಗಳು ಕಾಳಜಿ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

https://www.youtube.com/watch?v=mxA9HE4qgJQ

https://www.youtube.com/watch?v=WTHN3QhN8Zg

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *