ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್

Public TV
3 Min Read

ಬೆಂಗಳೂರು: ಸಕ್ಸಸ್ ನಮ್ಮ ತಲೆಗೆ ಏರಿಲ್ಲ. ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ. ಆ ಎದೆಯಲ್ಲಿ ನೀವು ಇದ್ದೀರಿ ಎಂದು ಯಶ್ ಹೇಳಿದ್ದಾರೆ.

ಕೆಜಿಎಫ್ ಬಿಡುಗಡೆಯಾಗಿ ಯಶಸ್ವಿಯಾಗಿ 25 ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅವರು, ಒಬ್ಬರು ಇಬ್ಬರಿಂದ ಈ ಸಿನಿಮಾ ಹಿಟ್ ಆಗಿಲ್ಲ. ಪ್ರತಿಯೊಬ್ಬರು ಶ್ರಮ ಪಟ್ಟು ದುಡಿದ ಫಲ ಇದು. ಈ ಚಿತ್ರವನ್ನು ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.

ಕನ್ನಡದ ಜನ ಇದು ನಮ್ಮ ಸಿನಿಮಾ ಎನ್ನುವ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದೀರಿ. ಎಲ್ಲ ಮಾಧ್ಯಮಗಳು ಜೊತೆಗೆ ಡಿಜಿಟಲ್ ಮೀಡಿಯಾದಲ್ಲೂ ಚಿತ್ರಕ್ಕೆ ಉತ್ತಮ ಪ್ರಚಾರ ಸಿಕ್ಕಿದೆ. ವಿಶೇಷವಾಗಿ ಟ್ರೋಲ್ ಪೇಜ್ ಗಳಲ್ಲೂ ಪ್ರಚಾರ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದು ತಿಳಿಸಿದರು.

ಕೆಜಿಎಫ್ ಚಾಪ್ಟರ್ 2 ಮುಂದಿನ ಕನಸು. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ನಮ್ಮ ಕಲಾವಿದರ ಮಾತುಗಳು, ಸಾರ್ಥಕತೆಯ ಭಾವ ಅವರ ಕಣ್ಣಿನಲ್ಲಿರುವ ಹೊಳಪು ನೋಡುವಾಗಲೇ ತಿಳಿಯುತ್ತದೆ. ಆರ್ಮಿ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ಈ ಫಲಿತಾಂಶ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶೇಷವಾಗಿ ಕಲಾವಿದರ ಫ್ಯಾಮಿಲಿಯ ಬಗ್ಗೆ ಮಾತನಾಡಿದ ಅವರು, ಈ ಚಿತ್ರ ಹಿಟ್ ಆಗಲು ನಮ್ಮ ಫ್ಯಾಮಿಲಿಯೂ ಕಾರಣ. ದೀರ್ಘ ಶೂಟಿಂಗ್ ನಡೆದಾಗ ಅವರೆಲ್ಲರು ನಮ್ಮನ್ನು ಸಹಿಸಿಕೊಂಡಿದ್ದಾರೆ. “ಏನ್ ಮಾಡದೇ ಇರುವ ಸಿನಿಮಾ ಮಾಡ್ತಾ ಇದ್ದೀರಾ” ಈ ರೀತಿಯ ಪ್ರಶ್ನೆಗಳು ಚಿತ್ರ ತಂಡದ ಸದಸ್ಯರಿಗೆ ಬಂದಿರುತ್ತದೆ. ಆದರೂ ನಮ್ಮೆನ್ನೆಲ್ಲ ಸಹಿಸಿಕೊಂಡು ಚಿತ್ರಕ್ಕೆ ಬೆಂಬಲ ನೀಡಿದ ಕುಟುಂಬದ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಯಶ್ ತಿಳಿಸಿದರು. ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ಹೆಸರನ್ನು ಹೇಳಿ ಯಶ್ ಧನ್ಯವಾದ ಹೇಳಿದ್ದು ವಿಶೇಷವಾಗಿತ್ತು.

ನಾನು ಅಭಿನಯ ಶಾಲೆಗೆ ಸೇರಬೇಕು ಎಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ `ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅನಂತ್ ಸರ್ ನನಗೆ ಹಲವು ಅಭಿನಯದ ಪಾಠ ಹೇಳಿಕೊಡುತ್ತಿದ್ದರು. ಫೌಂಡೇಶನ್ ಸರಿ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎನ್ನುವಂತೆ ಆ ಸೀರಿಯಲ್ ನಲ್ಲಿ ಬಹಳಷ್ಟು ವಿಚಾರಗಳನ್ನು ಅವರು ಕಲಿಸಿಕೊಟ್ಟರು. ಕಲಿಯುವ ವಯಸ್ಸಿನಲ್ಲಿ ಈ ಪಾಠ ಹೇಳಿಕೊಟ್ಟ ನನ್ನ ಮೊದಲ ಅಭಿನಯದ ಗುರುಗುಳು ಅನಂತ್ ಸರ್. ಶೂಟಿಂಗ್ ವೇಳೆ ಸರ್ ಏನು ಮಾಡಲ್ಲ ಅಲ್ಲ ಅಂತ ಅನಿಸುತಿತ್ತು. ಆದರೆ ಮಾನಿಟರ್ ನೋಡಿದ ಮೇಲೆ ಸರ್ ಅಭಿನಯ ಏನು ಎನ್ನುವುದು ಗೊತ್ತಾಗುತಿತ್ತು ಎಂದು ಯಶ್ ಈ ವೇಳೆ ಅನಂತ್ ನಾಗ್ ಅವರು ಹೇಳಿಕೊಟ್ಟ ಪಾಠಗಳನ್ನು ನೆನಪಿಸಿಕೊಂಡರು.

ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಮಾತನಾಡಿದ ಯಶ್, ಕೆಜಿಎಫ್ ಸ್ಕ್ರಿಪ್ಟ್ ತಂದಾಗ ಇಷ್ಟು ದೀರ್ಘ ಅವಧಿಯ ಸಿನಿಮಾ ಕಷ್ಟವಾಗಬಹುದು. ಬೇರೆ ಸಿನಿಮಾ ಮಾಡಿ ಎಂದು ನಾನು ಹೇಳಿದ್ದೆ. ಆದರೆ ಅವರು ನಾನು ಮುಂದೆ ಮಾಡಿದ್ರೆ ಕೆಜಿಎಫ್ ಸಿನಿಮಾ ಮಾತ್ರ ಮಾಡುವುದು. ಬೇರೆ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದಿದ್ದರು. ಕೆಲಸದ ಬಗ್ಗೆ ಇರುವ ಅವರ ಬದ್ಧತೆ ಏನು ಎನ್ನುವುದು ಈ ಸಿನಿಮಾ ನೋಡಿದ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

ಇಷ್ಟು ಒಂದು ದೊಡ್ಡ ಬಜೆಟ್ ಸಿನಿಮಾ ಮಾಡಬೇಕಾದರೆ ತಾಕತ್ ಬೇಕು. ಮಾರುಕಟ್ಟೆಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಧೈರ್ಯದಿಂದ ಬಂಡವಾಳ ಹಾಕಿ ನಿರ್ಮಾಪಕ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ ಎಂದು ಹೊಗಳಿದರು.

ಕ್ಯಾಮೆರಾ ಕೆಲಸ ಮಾಡಿದ ಭುವನ್ ಗೌಡ ಅವರ ಬಗ್ಗೆ ಮಾತನಾಡಿ, ಕ್ಯಾಮೆರಾ ಚಿತ್ರದ ಹೈಲೈಟ್ಸ್. ಮುಂಬೈನಲ್ಲಿ ಭುವನ್ ಗೌಡ ಡಿಒಪಿ ವೇಗ ನೋಡಿ ಎಲ್ಲರು ಅಚ್ಚರಿ ಪಟ್ಟಿದ್ದಾರೆ. ಭುವನ್ ಪ್ರತಿಭೆ ಎಲ್ಲರಿಗೂ ಗೊತ್ತಾಗಿದ್ದು, ಆ ಕಡೆ ಹೋದರೆ ಮತ್ತೆ ಅವರು ಈ ಕಡೆ ಬರಲ್ಲ ಎಂದು ಯಶ್ ಮೆಚ್ಚುಗೆ ಸೂಚಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *