ಮೈಸೂರಲ್ಲೇ ವಿಷ್ಣು ಸ್ಮಾರಕ ನಿರ್ಮಾಣ ಆರಂಭ: ಅನಿರುದ್ಧ್

Public TV
2 Min Read

-ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕಕ್ಕಾಗಿ ಅಭಿಮಾನಿಗಳ ಪ್ರತಿಭಟನೆ

ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣ ವಿಚಾರವಾಗಿ ನಟ ಅನಿರುದ್ಧ ಸರ್ಕಾರಕ್ಕೆ 9ನೇ ವರ್ಷದ ಪುಣ್ಯಸ್ಮರಣೆ ವೇಳೆಗೆ ಅಂತಿಮ ನಿರ್ಣಯ ಆಗಬೇಕೆಂದು ಡೆಡ್ ಲೈನ್ ನೀಡಿದ್ದರು. ಈಗ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ ಎಂದು ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿರುದ್ಧ್, ಡಿಸೆಂಬರ್ 30 ಡೆಡ್ ಲೈನ್ ಫಲ ಕೊಟ್ಟಿದೆ. ಇನ್ನೇರಡು ತಿಂಗಳಲ್ಲಿ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಒಂಬತ್ತು ವರ್ಷಗಳಿಂದ ಸಾಕಷ್ಟು ನೋವು ಪಟ್ಟಿದ್ವಿ. ಈಗ ಅದೆಲ್ಲಕ್ಕೂ ಉತ್ತರ ಸಿಗುತ್ತಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಕಳೆದ 9 ವರ್ಷಗಳಲ್ಲಿ 5 ಕಡೆ ಸ್ಮಾರಕ ನಿರ್ಮಾಣದ ಜಾಗ ಬದಲಾಗಿತ್ತು. ಹಿರಿಯ ನಟ ಅಂಬರೀಶ್ ನಿಧನದ ನಂತರ ಕಂಠೀರವ ಸ್ಟುಡಿಯೋ ಅನ್ನೋ ಮಾತು ಬಂದಾಗ ನಾನು ಆ ರೀತಿ ಎಚ್ಚರಿಕೆ ಕೊಡಬೇಕಾಯಿತು. ಪದೇ ಪದೇ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಬದಲಾವಣೆ ಮಾಡುವುದು ವಿಷ್ಣು ಹೆಸರಿಗೆ ಮೋಸ ಮಾಡಿದಂತೆ. ಈ ಡೆಡ್ ಲೈನ್ ಅಲ್ಲೂ ಸರ್ಕಾರ ಕಾರ್ಯೋನ್ಮುಖವಾಗದೇ ಇದ್ದಿದ್ದರೆ ಸಿಂಹಗಳು ಸುಮ್ಮನೇ ಕೂರುತ್ತಿರಲಿಲ್ಲ ಅಂದ್ರು.

ಅಭಿಮಾನಿಗಳಿಗೂ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಅಸಾಧ್ಯ ಅನ್ನೋದು ಗೊತ್ತಾಗಿದೆ. ಕಳೆದ ಮೂರು ವರ್ಷಗಳಿಂದ ಸಮಾಧಿ ಸ್ಥಳಕ್ಕೆ ಹೋಗುವುದೇ ಬಿಟ್ಟಿದ್ದೀವಿ. ಮನೆಯಲ್ಲೇ ಪುಣ್ಯ ಸ್ಮರಣೆ ನಡೆಯುತ್ತದೆ. ಅಭಿಮಾನಿಗಳಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಭಿಮಾನಿಗಳು ಮುಗ್ಧರು ಎಂದು ಅನಿರುದ್ಧ್ ತಿಳಿಸಿದ್ದಾರೆ.

ಇಂದು ನಗರದ ಕೆಲವೆಡೆ ವಿಷ್ಣು ಅಭಿಮಾನಿಗಳು ಸ್ಮಾರಕ ಅಭಿಮಾನ್ ಸ್ಟುಡಿಯೋದಲ್ಲಿ ಆಗಬೇಕೆಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕುರಿತು ಮಾತನಾಡಿದ ಅನಿರುದ್ಧ, ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಹಲವು ತೊಡಕುಗಳಿವೆ. ಹಾಗಾಗಿ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸುವುದು ಉತ್ತಮ. ಪ್ರತಿಭಟನೆ ಮಾಡುತ್ತಿರುವ ಅಭಿಮಾನಿಗಳು ಮುಗ್ಧರು. ಅವರಿಗೆ ಅಭಿಮಾನ್ ಸ್ಟುಡಿಯೋ ಬಗೆಗಿನ ಮಾಹಿತಿ ಗೊತ್ತಿಲ್ಲ. ಎರಡು ವಾರಗಳ ಹಿಂದೆ ಅಭಿಮಾನಿಗಳ ಜೊತೆ ಚರ್ಚೆ ನಡೆಸಲಾಗಿತ್ತು. ಇಂದು ಪ್ರತಿಭಟನೆ ನಡೆಸುತ್ತಿರುವವರು ಅಂದಿನ ಸಭೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *