ಚರ್ಚ್ ಗೆ ತೆರಳಿದ್ದ ಯುವಕನ ಕೊಲೆ- ಕ್ರಿಸ್‍ಮಸ್ ಹಬ್ಬದಂದೇ ಹರಿಯಿತು ರಕ್ತ..!

Public TV
1 Min Read

ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆಂದು ಚರ್ಚ್ ಗೆ ತೆರಳಿದ್ದ ಯುವಕನೊಬ್ಬನನ್ನು ಗೆಳೆಯರೇ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಡಿಜೆ ಹಳ್ಳಿಯ ದೊಡ್ಡಣ್ಣ ನಗರ ನಿವಾಸಿ ಜಗದೀಶ್ ಕುಮಾರ್ ಮೃತ ದುರ್ದೈವಿ. ಈತ ಡಿ.24 ರಂದು ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ರಾತ್ರಿ ಚರ್ಚ್ ಗೆ ತೆರಳಿದ್ದನು. ಆದರೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ. ಕೊನೆಗೆ ಜಗದೀಶ್ ನನ್ನು ಹುಡುಕಿಕೊಂಡು ಕುಟುಂಬದವರು ಹೋಗಿದ್ದಾರೆ. ಆಗ ಚರ್ಚ್ ನ ಕೂಗಳತೆ ದೂರದಲ್ಲೇ ಜಗದೀಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಕುಟುಂಬಸ್ಥರು ಜಗದೀಶ್ ನನ್ನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಮೃತ ಪಟ್ಟಿದ್ದಾನೆ.

ಚರ್ಚ್ ಗೆ ತೆರಳಿದ್ದ ಜಗದೀಶ್ ಕುಮಾರ್ ಮನೆಗೆ ಬರುವಾಗ ಕಂಠಪೂರ್ತಿ ಕುಡಿದಿದ್ದನು. ಈ ವೇಳೆ ಅದೇ ಏರಿಯಾದ ನಿವಾಸಿ ಅರುಣ್ ಎಂಬಾತ ಚರ್ಚ್ ಮುಂದೆ ನಡೆದು ಹೋಗುತ್ತಿದ್ದವನು ಜಗದೀಶ್‍ನನ್ನು ನೋಡಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಕುಡಿತದ ಅಮಲಿನಲ್ಲಿ ಜಗದೀಶ್ ಅಲ್ಲೇ ಇದ್ದ ರಾಡ್‍ನಿಂದ ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಅಲ್ಲಿಂದ ಅರುಣ್ ಪರಾರಿಯಾಗಿದ್ದು, ತನ್ನ ಗೆಳೆಯರಾದ ಶರತ್, ಅಪ್ಪು ಹಾಗೂ ಜಾನ್ ಪೀಟರ್ ಜೊತೆ ಬಂದು ಚರ್ಚ್ ಮುಂಭಾಗ ನಿಂತಿದ್ದ ಜಗದೀಶ್ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದು ಬೀಳುತಿದ್ದಂತೆಯೇ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಮೃತನ ಸಂಬಂಧಿ ರವಿ ಕುಮಾರ್ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಜಗದೀಶ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು ಅರುಣ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಜಗದೀಶ್ ಕುಮಾರ್ ಒಂದು ಕಾಲದಲ್ಲಿ ಇದೇ ಏರಿಯಾದಲ್ಲಿ ಪೊರ್ಕಿಯಾಗಿದ್ದು, ಮೇಲ್ನೋಟಕ್ಕೆ ಕುಡಿತದ ಅಮಲಿನಲ್ಲಿ ಕೊಲೆಯಾದರೂ ಹಳೇ ವೈಷಮ್ಯಕ್ಕೆ ನಡೆದಿರಬಹುದು ಅಂತ ಪೊಲೀಸರು ಶಂಕಿಸಿದ್ದಾರೆ. ಆದ್ರೆ ತನಿಖೆಯಿಂದಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *