9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ- ಕರುಳಬಳ್ಳಿ ಜೊತೆ ಜೀವಂತವಾಗಿ ನೇತಾಡುತ್ತಿದ್ದ ಮಗು ರಕ್ಷಣೆ

Public TV
2 Min Read

ಭೋಪಾಲ್: 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಹೊಟ್ಟೆಯಿಂದ ಕರುಳಬಳ್ಳಿಯೊಂದಿಗೆ ಜಾರಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಲಕ್ಷ್ಮಿ ಠಾಕೂರ್(36) ಆತ್ಮಹತ್ಯೆ ಮಾಡಿಕೊಂಡ ತುಂಬು ಗರ್ಭಿಣಿ. ಲಕ್ಷ್ಮಿ 9 ತಿಂಗಳು ಗರ್ಭಿಣಿಯಾಗಿದ್ದು, ಈಗಾಗಲೇ ಆಕೆಗೆ 4 ಮಕ್ಕಳಿದ್ದರು. ಲಕ್ಷ್ಮಿ ಗುರುವಾರ ಬೆಳಗ್ಗೆ 6.30ಕ್ಕೆ ತನ್ನ ಮನೆಯ ಬಳಿಯಿದ್ದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಗಂಡು ಮಗು ಕರುಳಬಳ್ಳಿ ಸಮೇತ ಲಕ್ಷ್ಮಿ ಕಾಲಿನ ಮಧ್ಯೆ ಸೀರೆಯಲ್ಲಿ ಜೀವಂತವಾಗಿ ನೇತಾಡುತ್ತಿತ್ತು.

ಈ ಘಟನೆ ಬಗ್ಗೆ ನಮಗೆ ಮಾಹಿತಿ ಬಂದಾಗ ನಾವು ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದೇವು. ವೈದ್ಯರು ಬರುವವರೆಗೂ ನೇತಾಡುತ್ತಿದ್ದ ಗಂಡು ಮಗುವನ್ನು ಕ್ಲೀನ್ ಮಾಡಿ ಅದನ್ನು ಬೆಚ್ಚಗಿರಿಸಿದ್ದೇವು. ನಂತರ ವೈದ್ಯರು ಬಂದು ಮಗುವನ್ನು ತಾಯಿಯ ಕರುಳಬಳ್ಳಿಯಿಂದ ಬೇರ್ಪಡಿಸಿದ್ದಾರೆ. ಸದ್ಯ ಮಗುವನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಬದುಕುಳಿಯುವ ಎಲ್ಲ ಸಾಧ್ಯತೆ ಇದೆ ಎಂದು ಎಸ್‍ಐ ಕವಿತಾ ಸಹ್ನಿ ಹೇಳಿದ್ದಾರೆ.

ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುರುವಾರ ಬೆಳಗ್ಗೆ 7.13 ಕರೆ ಬಂತು. ನಾವು ಆಕೆಯ ಮೃತದೇಹವನ್ನು ಪರಿಶೀಲಿಸಲು ಹೋಗಿದ್ದಾಗ ಆಕೆಯ ಸೀರೆಯಲ್ಲಿ ಮಗು ನೇತಾಡುತ್ತಿರುವುದು ಕಾಣಿಸಿತು. ಆಗ ವೈದ್ಯರನ್ನು ಕರೆಸಿ ಕರುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ತಾಯಿಯನ್ನು ಪ್ರತ್ಯೇಕಿಸಲಾಯಿತು. ಮಗುವನ್ನು ತೆಗೆದ ಬಳಿಕ ಲಕ್ಷ್ಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದರು.

ಇದು ಒಂದು ದುರಾದೃಷ್ಟಕರ ಘಟನೆ. ಮಹಿಳೆಯನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಿಲ್ಲ. ಆದರೆ ಮಗುವನ್ನು ರಕ್ಷಿಸಿದ್ದೇವೆ. ಮಗು ಬದುಕಲಿ ಎಂದು ಬೇಡಿಕೊಳ್ಳುತ್ತಿದ್ದೇವು. ಸರಿಯಾದ ಸಮಯಕ್ಕೆ ನಮಗೆ ಕರೆ ಮಾಡಿದ್ದಕ್ಕೆ ಮಗು ಬದುಕುಳಿದಿದೆ, ಇಲ್ಲದಿದ್ದರೆ ಮಗು ಕೂಡ ಮೃತಪಡುತ್ತಿತ್ತು ಎಂದು ವೈದ್ಯರು ತಿಳಿಸಿದರು. ತಾಯಿ ಮೃತಪಟ್ಟರೂ ಮಗು ಜೀವಂತವಾಗಿರುವುದನ್ನು ನೋಡಿದರೆ ಇದೊಂದು ಪವಾಡವೇ ಎಂದು ಎನ್ನಿಸುತ್ತದೆ ಎಂದು ಕವಿತಾ ಹೇಳಿದರು.

ಲಕ್ಷ್ಮಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನನ್ನ ಹಾಗೂ ಲಕ್ಷ್ಮಿ ನಡುವೆ ಯಾವುದೇ ಜಗಳ ಇರಲಿಲ್ಲ. ಇಬ್ಬರು ಬುಧವಾರ 9 ಗಂಟೆವರೆಗೂ ಟಿವಿ ನೋಡಿ ಮಲಗಲು ಹೋಗಿದ್ದೇವು. ಗುರುವಾರ ಬೆಳಗ್ಗೆ 6 ಗಂಟೆಗೆ ನಾನು ಎದ್ದಾಗ ಲಕ್ಷ್ಮಿ ಎಲ್ಲಿಯೂ ಕಾಣಿಸಲಿಲ್ಲ. ಆಕೆಯನ್ನು ಹುಡುಕುತ್ತಿದ್ದಾಗ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ನಾನು ಸ್ಥಳೀಯ ನಿವಾಸಿಗಳಿಗೆ ತಿಳಿಸಿದೆ ಎಂದು ಪತಿ ಸಂತೋಷ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಮಹಿಳೆ ನೇಣಿಗೆ ಶರಣಾಗುವ ಮೊದಲು ಅಥವಾ ನಂತರ ಮಗು ಜನಿಸಿರುವುದು ಇದು ಮೊದಲ ಪ್ರಕರಣ ಎಂದು ವೈದ್ಯಕೀಯ ಲೋಕದಲ್ಲಿ ಹೇಳಲಾಗುತ್ತಿದೆ. ಲಕ್ಷ್ಮಿ ಆತ್ಮಹತ್ಯೆ ಹಾಗೂ ಡೆಲಿವರಿಯಾದ ಮಗುವಿನ ಬಗ್ಗೆ ಸಮಯ ಸರಿಯಾಗಿ ಗೊತ್ತಿಲ್ಲ. ಮಹಿಳೆ ನೇಣಿಗೆ ಶರಣಾದ ಹಿನ್ನಲೆಯಲ್ಲಿ ಮಗು ಜನಿಸಿರಬಹುದು ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *