ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

Public TV
1 Min Read

ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ನಂತರ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ ಮತ್ತು ಸ್ವಾಮಿ ದಂಪತಿಯ ಒಂದೂವರೆ ತಿಂಗಳ ಗಂಡು ಮಗುವಿಗೆ ಗುರುವಾರ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಲಾಗಿತ್ತು. ಚುಚ್ಚುಮದ್ದು ಕೊಡಿಸಿದ ನಂತರ ಅಸ್ವಸ್ಥಗೊಂಡಿದ್ದ ಮಗು ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ ಅಂತ ಪೋಷಕರು ಆರೋಪಿಸಿದ್ದಾರೆ.

ಪೋಷಕರಿಗೆ ಎರಡು ಹೆಣ್ಣು, ಒಂದು ಗಂಡು ಮಗುವಿತ್ತು. ಇದೇ ಭಾನುವಾರ ಮೃತ ಮಗುವಿನ ನಾಮಕರಣ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗು ಸಾವಿಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಆದ್ರೆ ಮಗು ಸಾವಿಗೂ ಚುಚ್ಚುಮದ್ದಿಗೂ ಸಂಬಂಧವಿಲ್ಲ ಅಂತ ಡಿಎಚ್‍ಒ ನಾಗರಾಜ್ ತಿಳಿಸಿದ್ದಾರೆ.

ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. ಈ ಹಿಂದೆಯೂ ಪೆಂಟವಲೆಂಟ್ ಚುಚ್ಚುಮದ್ದು ಪಡೆದ ನಂತರ ಮಂಡ್ಯದ ಚಿಂದಗಿರಿದೊಡ್ಡಿಯಲ್ಲಿ ಎರಡು ಮಕ್ಕಳು ಮೃತಪಟ್ಟಿದ್ದವು. ತನಿಖೆ ನಂತರ ಚುಚ್ಚುಮದ್ದಿಗೂ ಮಕ್ಕಳ ಸಾವಿಗೂ ಸಂಬಂಧವಿಲ್ಲ ಎಂಬ ವರದಿ ಬಂದಿತ್ತು.

ಪೆಂಟಾವಲೆಂಟ್ ನೀಡುವುದೇಕೆ?:
ಹುಟ್ಟಿದ ಪ್ರತಿಯೊಂದು ಮಗುವಿಗೂ ಒಂದೂವರೆ, ಎರಡೂವರೆ, ಮೂರೂವರೆ ತಿಂಗಳಲ್ಲಿ ಕಡ್ಡಾಯವಾಗಿ ಪೆಂಟಾವಲೆಂಟ್ ಚುಚ್ಚುಮದ್ದು ನೀಡಲಾಗುತ್ತದೆ. ಇದು ನಾಯಿ ಕೆಮ್ಮು, ಗಂಟಲು ಮಾರಿ, ಧನುರ್ವಾಯು, ಹೆಪಟೈಟೀಸ್ ಬಿ, ಇನ್‍ಫ್ಲುಯೆಂಜಾ ಮೊದಲಾದ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *