3 ಫೋಟೋ ಮದ್ವೆ ಪ್ರಕರಣಕ್ಕೆ ಟ್ವಿಸ್ಟ್ – ಪೂರ್ವನಿಯೋಜಿತವೆಂದ್ರು ವರನ ಕುಟುಂಬಸ್ಥರು

Public TV
1 Min Read

ಹಾಸನ: ಮೂರು ಫೋಟೋ ಮೂಲಕ ಮದುವೆ ನಿಂತು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಪೂರ್ವನಿಯೋಜಿತ ಅಂತ ವರ ತಾರೇಶ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಶೃತಿ ಮತ್ತು ಅಭಿಲಾಷ್ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಅಷ್ಟೊತ್ತಿಗೆ ಶೃತಿಗೆ ಮದುವೆ ನಿಗದಿಯಾಗಿತ್ತು. ಇದರಿಂದ ಹೇಗಾದರೂ ಮಾಡಿ ಈ ಮದುವೆ ತಪ್ಪಿಸಬೇಕೆನ್ನುವ ಉದ್ದೇಶದಿಂದ ವರ ತಾರೇಶ್‍ಗೆ ಇಬ್ಬರು ಜೊತೆಯಲ್ಲಿರುವ ಫೋಟೋ ಸೆಂಡ್ ಮಾಡಿದ್ದಾರೆ. ಇದರಿಂದ ಮದುವೆ ಮುರಿದು ಹೋಗಿದ್ದು, ಅವರೇ ಇಷ್ಟಪಟ್ಟಂತೆ ಮದುವೆಯಾಗಿದ್ದಾರೆ ಎಂದು ವರ ತಾರೇಶ್ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಇದರಿಂದ ನಮಗೆ ಅನ್ಯಾಯ ಆಗಿದೆ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಅಲವತ್ತುಕೊಂಡಿದ್ದಾರೆ. ಗುರುವಾರ ಶೃತಿ ಹಾಗೂ ತಾರೇಶ್ ವಿವಾಹ ನಿಗದಿಯಾಗಿತ್ತು. ಆದ್ದರಿಂದ ಬುಧವಾರ ಸಂಜೆಯೇ ವಧು-ವರರ ಸಂಬಂಧಿಕರು ಮದುವೆ ಛತ್ರಕ್ಕೆ ಬಂದು ಶಾಸ್ತ್ರ ಸಂಪ್ರದಾಯವನ್ನು ನೆರವೇರಿಸಿದ್ದರು. ಮರುದಿನ ಮದುವೆ ನಡೆಯಲಿದ್ದು, ಅದೇ ದಿನ ಮುಂಜಾನೆ ವರ ತಾರೇಶ್ ಮೊಬೈಲಿಗೆ ಅಪರಿಚಿತರು ಮೂರು ಫೋಟೋವನ್ನು ಕಳುಹಿಸಿದ್ದರು.

ತನ್ನ ಮೊಬೈಲಿಗೆ ಬಂದ ಫೋಟೋಗಳನ್ನು ನೋಡಿದ ತಕ್ಷಣ ವರ ತಾರೇಶ್, ವಧುವಿಗೆ ಬೇರೊಬ್ಬರ ಜೊತೆ ಸಂಬಂಧ ಇರುವುದಾಗಿ ಆರೋಪ ಮಾಡಿದ್ದನು. ಅಷ್ಟೇ ಅಲ್ಲದೇ ತಾಳಿ ಕಟ್ಟಲು ಇನ್ನೂ ಎರಡು ಗಂಟೆ ಮುಂಚೆ ಮದುವೆ ಬೇಡವೆಂದು ವರ ತಾರೇಶ್ ಹಠ ಹಿಡಿದ್ದಿದ್ದನು. ಕೊನೆಗೆ ಮದುವೆ ಮನೆಯಲ್ಲಿ ಗಲಾಟೆ ಶುರುವಾಗಿತ್ತು.

ಈ ಬಗ್ಗೆ ವಿಷಯ ತಿಳಿದು ಮದುವೆ ಮಂಟಪಕ್ಕೆ ಫೋಟೋದಲ್ಲಿದ್ದ ಯುವಕ ಅಭಿಲಾಷ್ ಬಂದಿದ್ದನು. ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸರು ಬಂದಿದ್ದಾರೆ. ಆಗ ಮಾತುಕತೆ ನಡೆಸಿ ವಧುವಿನ ಹೇಳಿಕೆಯನ್ನು ಪಡೆದುಕೊಂಡಿದ್ದು, ಕೊನೆಗೆ ತನ್ನಿಂದ ಯುವತಿ ಮದುವೆ ನಿಲ್ಲುವುದು ಬೇಡೆಂದು ಶೃತಿಯನ್ನು ಅಭಿಲಾಷ್ ಮದುವೆಯಾಗಿದ್ದನು. ಪೊಲೀಸರ ಸಮ್ಮುಖದಲ್ಲಿ ಶೃತಿ ಮತ್ತು ಅಭಿಲಾಷ್ ವಿವಾಹ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *