ಕೆಲ್ಸ ಮುಗ್ಸಿ ಬರೋದಾಗಿ ತಂದೆಗೆ ಹೇಳಿ ನೇಣಿಗೆ ಶರಣಾದ್ಳು!

Public TV
1 Min Read

ಚೆನ್ನೈ: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನಲ್ಲಿರುವ ಅಣ್ಣಾ ನಗರದಲ್ಲಿ ನಡೆದಿದೆ.

ಜಯಶ್ರೀ (26) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಜಯಶ್ರೀ 2016ರಲ್ಲಿ ಸರವಣನ್ ಎಂಬವರ ಜೊತೆ ವಿವಾಹವಾಗಿದ್ದರು. ಪತಿ ಸರವಣನ್ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಮಂಗಳವಾರ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮದುವೆಯ ಸಮಯದಲ್ಲಿ 70 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಮಧ್ಯೆ ಜಯಶ್ರೀಗೆ ಹೆರಿಗೆಯಾಗಿತ್ತು. ಆದರೆ ಮಗು ಹುಟ್ಟುವ ಮೊದಲೆ ಮೃತಪಟ್ಟಿತ್ತು. ಇದರಿಂದ ಜಯಶ್ರೀ ಖಿನ್ನತೆಗೆ ಒಳಗಾಗಿ ತನ್ನ ಪೋಷಕರ ಮನೆಯಲ್ಲಿ ಇದ್ದಳು.

ಜಯಶ್ರೀ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾಳೆ. ನನ್ನ ಮಗಳ ಸಾವಿಗೆ ಆಕೆಯ ಪತಿ, ಅತ್ತೆ-ಮಾವನೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಜಯಶ್ರೀ ತನ್ನ ಅತ್ತೆ-ಮಾವ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಂದೆಗೆ ತಿಳಿಸಿದ್ದಾಳೆ. ಕೂಡಲೇ ತಂದೆ ಮಗಳ ಮನೆಗೆ ಹೋಗಿ ತನ್ನ ಜೊತೆ ಬರುವಂತೆ ಕೇಳಿದ್ದಾರೆ. ಆಗ ಜಯಾ ಮನೆಯಲ್ಲಿ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಹೇಳಿ ತಂದೆಯನ್ನು ವಾಪಸ್ ಕಳುಹಿಸಿದ್ದಾಳೆ.

ಮಾರನೇ ದಿನ ಅಂದರೆ ಮಂಗಳವಾರ ಜಯಶ್ರೀ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿದ ಕಾಸಿಮೆಡು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ನನ್ನ ಮಗಳನ್ನು ಸರವಣನ್ ಕುಟುಂಬದವರು ಕೊಲೆ ಮಾಡಿದ್ದಾರೆ. ಆದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತಾಳ ತಂದೆ ಪೊಲೀಸ್ ಠಾಣೆಗೆ ಹೋಗಿ ಆರೋಪಿಸಿದ್ದಾರೆ. ಜೊತೆಗೆ ವರದಕ್ಷಿಣೆಗೆ ಕಿರುಕುಳ ನೀಡಿದ್ದಾರೆ. ಆದ್ದರಿಂದ ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿ ಸರವಣನ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *