ಮಡಿಕೇರಿ: ಜ್ಯೋತಿಷಿ ಮಹಾಶಯನೊಬ್ಬ ನಿನಗೆ ಮಹಾಕಂಟಕ ಇದೆ ಎಂದು ಹೇಳಿದ ಬಳಿಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಕಾರ್ಯಪ್ಪ (24) ಆತ್ಮಹತ್ಯೆಗೆ ಶರಣಾದ ಯುವಕ. ಈತ ಟಿ. ಶೆಟ್ಟಿಗೇರಿ ಗ್ರಾಮದ ದೇವಯ್ಯ ಮತ್ತು ಮುತ್ತಮ್ಮ ದಂಪತಿಯ ಪುತ್ರನಾಗಿದ್ದು, ಮೃತ ಕಾರ್ಯಪ್ಪನಿಗೆ ಕೇರಳದ ಜ್ಯೋತಿಷಿ ಮಹಾಶಯನೊಬ್ಬ ನಿನಗೆ ಕಂಟಕ ಇದೆ ಎಂದು ಹೇಳಿದ್ದಾನೆ. ಇದರಿಂದ ಭಯಗೊಂಡ ಕಾರ್ಯಪ್ಪ ಜ್ಯೋತಿಷ್ಯ ಕೇಳಿಕೊಂಡ ಬಂದ ನಂತರ ಪ್ರತಿ ಕೆಲಸ ಮಾಡುವಾಗಲೂ ಭಯ ಪಡುತ್ತಿದ್ದನು. ಕಾರು ಚಾಲನೆ ಮಾಡಲು ಅನೇಕ ಬಾರಿ ಯೋಚನೆ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಮೃತ ಕಾರ್ಯಪ್ಪ ಗ್ರಾಮದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ತುಂಬಾ ಆ್ಯಕ್ಟೀವ್ ಆಗಿ ಇದ್ದನು. ಆದರೆ ಕಳೆದ 15 ದಿನಗಳಿಂದ ತುಂಬಾ ಡಲ್ ಆಗಿ ಇರುತ್ತಿದ್ದನು. ಅದಕ್ಕೆ ಕಾರಣ ಕೇರಳದ ಜ್ಯೋತಿಷಿ, ನಿನ್ನ ಟೈಮ್ ಸರಿಯಿಲ್ಲ, 15 ದಿನ ಎಚ್ಚರದಿಂದಿರು, ಅಲ್ಲದೇ ಅಷ್ಟರೊಳಗೆ ಪೂಜೆ ಮಾಡಿಸು ಎಂದು ಹೇಳಿದನಂತೆ. ಆದ್ದರಿಂದ ಜ್ಯೋತಿಷಿ ಹೇಳಿದ ಮಾತನ್ನೇ ಮನಸಿಗೆ ಹಚ್ಚಿಕೊಂಡಿದ್ದನು ಮೃತನ ಮಾವ ದತ್ತ ಹೇಳಿದ್ದಾರೆ.
ಕಾರ್ಯಪ್ಪ ನನ್ನ ಟೈಮ್ ಸರಿಯಿಲ್ಲ ಅಂತ ಎಂದುಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದನು. ತುಂಬಾ ಯೋಚನೆ ಮಾಡುತ್ತಿದ್ದ, ಒಬ್ಬನೇ ಮನೆಯಲ್ಲಿ ಇರುತ್ತಿದ್ದನು. ಹೊರಗಡೆ ಹೋದಾಗ ಕಾರು ಓಡಿಸುದಕ್ಕೂ ಭಯ ಪಡುತ್ತಿದ್ದನು. ಇದನ್ನೆಲ್ಲಾ ನೋಡಿದ್ದ ಅಪ್ಪ ಅಮ್ಮ ಪರಿಹಾರ ಪೂಜೆ ಮಾಡಿಸುವುದಕ್ಕೆ ದಿನ ನಿಗದಿ ಮಾಡಿದ್ದರು. ಆದರೆ ಹುತ್ತರಿ ಮುಗಿದ ಮೇಲೆ ಪೂಜೆ ಮಾಡಿಸಿದರಾಯಿತು ಅಂತ ಮಗನಿಗೂ ಧೈರ್ಯ ಹೇಳಿ ದಿನ ಮುಂದಕ್ಕೆ ಹಾಕಿದ್ದರು. ಕಂಟಕದ ಖಿನ್ನತೆಯಲ್ಲಿಯೇ ಇದ್ದ ಕಾರ್ಯಪ್ಪನಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ ಗುರುವಾರ ಮುಂಜಾನೆ ತನ್ನ ಬೆಡ್ ರೂಮ್ ನಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸ್ಥಳೀಯ ಸುಮಂತ್ ತಿಳಿಸಿದ್ದಾರೆ.
ಜ್ಯೋತಿಷಿ ಬಳಿಗೆ ಹೋಗದಿದ್ದರೆ ಅಥವಾ ಜ್ಯೋತಿಷಿ ಹೇಳಿದ್ದು ತಲೆಗೆ ಹಚ್ಚಿಕೊಳ್ಳದಿದ್ದರೆ ಯುವಕ ಇಂತ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv