Exclusive: ಎಂಇಪಿ ನಾಯಕಿ ನೌಹಿರಾ ಶೇಖ್ ಕೇಸ್ ಖುಲಾಸೆಗೆ ಕೋಟಿ ಕೋಟಿ ಹಣ ಪಡೆದ್ರಾ ರೆಡ್ಡಿ?

Public TV
2 Min Read

ಬೆಂಗಳೂರು: ಬ್ಯಾಂಕ್ ನೀಡುವ ಬಡ್ಡಿಗಿಂತಲೂ ಹೆಚ್ಚಿನ ದರದಲ್ಲಿ ಬಡ್ಡಿ ನೀಡುವುದಾಗಿ ಹೇಳಿ ದೇಶಾದ್ಯಂತ ಕೋಟ್ಯಂತರ ರೂಪಾಯಿ ವಂಚಿಸಿ ಸದ್ಯ ಬಂಧನದಲ್ಲಿರುವ ಎಂಇಪಿ ಪಕ್ಷದ ಸ್ಥಾಪಕಿ ನೌಹಿರಾ ಶೇಖ್ ಅವರನ್ನು ಪಾರು ಮಾಡಲು ಜನರ್ದಾನ ರೆಡ್ಡಿ ಪ್ರಯತ್ನಿಸಿದ್ದರು ಎನ್ನುವ ಗಂಭೀರ ಆರೋಪವೊಂದು ಈಗ ಕೇಳಿ ಬಂದಿದೆ.

ಆಲ್‍ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ (ಎಂಇಪಿ) ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ ತೆಲಂಗಾಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಈ ಪ್ರಕರಣದಿಂದ ಅವರನ್ನು ರಕ್ಷಿಸಲು ರೆಡ್ಡಿ ಸಹಾಯ ಮಾಡುವುದಾಗಿ ಹಣ ಪಡೆದಿದ್ದರು ಎನ್ನುವ ಆರೋಪ ಈಗ ಕೇಳಿಬಂದಿದೆ.

ನೌಹಿರಾ ಶೇಖ್ ದೇಶದ ಪ್ರಮುಖ ನಗರಗಳಲ್ಲಿ ಬಂಡಾವಳ ಹೂಡಿಕೆ ಮಾಡುವ ಹೆಸರಿನಲ್ಲಿ ಜನರಿಂದ ಕೋಟಿ ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಾರೆ. ಈಗಾಗಲೇ ಮುಂಬೈ ಪೊಲೀಸರು ಬಾಡಿ ವಾರೆಂಟ್ ಪಡೆದು ನೌಹಿರಾ ಶೇಖ್ ವಿಚಾರಣೆಗೆ ಒಳಪಡಿಸಿದ್ದಾರೆ. 

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತನ್ನನ್ನು ಪಾರು ಮಾಡುವಂತೆ ನೌಹಿರಾ ಶೇಖ್ ಗಾಲಿ ಜನಾರ್ದನ ರೆಡ್ಡಿ ಅವರ ಸಹಾಯಕೋರಿದ್ದರು. ನೌಹಿರಾ ಶೇಖ್ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದ ರೆಡ್ಡಿ ಕೋಟಿ ಕೋಟಿ ಹಣ ಪಡೆದಿದ್ದರು ಎನ್ನಲಾಗಿದೆ. ರೆಡ್ಡಿ ಅವರ ಆಪ್ತರ ಬ್ಯಾಂಕ್ ಖಾತೆಗೆ ಈ ಹಣ ಸಂದಾಯವಾಗಿದೆ ಎಂಬ ಮಾಹಿತಿಯೂ ಈಗ ಲಭ್ಯವಾಗಿದೆ. ಸದ್ಯ ರೆಡ್ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಮೂಲಕ ಸಹಾಯ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು ಎನ್ನಲಾಗಿದೆ.

ಯಾರು ಈ ನೌಹಿರಾ ಶೇಖ್?

ನೌಹಿರಾ ಶೇಖ್ ಬೆಂಗಳೂರು, ಹೈದ್ರಾಬಾದ್, ಮುಂಬೈ, ಪುಣೆ, ದೆಹಲಿಯಲ್ಲಿ ಬಂಡವಾಳ ಹೂಡಿಕೆ ಮಾಡುವ ಹೆಸರಿನಲ್ಲಿ ಹಲವರಿಂದ ಹಣ ಪಡೆದು ಸಾವಿರ ಕೋಟಿಗೂ ಹೆಚ್ಚು ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಸ್ವರಾಜ್ ಪಕ್ಷದ ಸಂಸ್ಥಾಪಕಿಯಾಗಿರುವ ನೌಹಿರಾ ವಿರುದ್ಧ 2018 ಮೇ ತಿಂಗಳ ಬಳಿಕ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಅಗಸ್ಟ್ 25ರಂದು ಹೈದರಾಬಾದ್‍ನಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಗುಪ್ತಚರ ಇಲಾಖೆಯೂ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. ನೌಹಿರಾ ವಂಚಿಸಿದವರಲ್ಲಿ ಹೆಚ್ಚಿನವರು ಮುಸ್ಲಿಂ ಧರ್ಮಕ್ಕೆ ಸೇರಿದವರೇ ಆಗಿದ್ದು, ಹೀರಾ ಗ್ರೂಪ್ ಸಂಸ್ಥೆಯ ಮೂಲಕ ವ್ಯವಹಾರ ನಡೆಸುವುದಾಗಿ ನೌಹಿರಾ ಭರವಸೆ ನೀಡಿ ಹಣ ಸಂಗ್ರಹಿಸಿದ್ದರು ಎಂಬ ಮಾಹಿತಿ ಇದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv  

Share This Article
Leave a Comment

Leave a Reply

Your email address will not be published. Required fields are marked *