ಒಂದು ದಿನವೂ ರಜೆ ಪಡೆಯದೆ 31 ವರ್ಷ ಚಾಲಕ ಸೇವೆ – ನಿವೃತ್ತಿಯ ದಿನ ಮದುವಣಗಿತ್ತಿಯಂತೆ ಬಸ್ ಅಲಂಕಾರ

Public TV
1 Min Read

ಮಂಡ್ಯ: ಕಳೆದ 31 ವರ್ಷಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಒಂದೂ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ಸನ್ನು ವಿಶೇಷವಾಗಿ ಅಲಂಕರಿಸಿ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ.

ಕೆ.ಬಿ.ಬೋರೇಗೌಡ ಅವರು ಒಂದು ದಿನ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ. ಇವರು 31 ವರ್ಷಗಳ ಕಾಲ ಅಪಘಾತ ರಹಿತ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಕೆ.ಆರ್.ಪೇಟೆ ಬೇರ್ಯ ಮಾರ್ಗದಲ್ಲಿ ಸಂಚರಿಸುತ್ತಿರುವ ಬಸ್ಸಿನ ಚಾಲಕರಾಗಿ ಕೆಲಸ ಮಾಡುತ್ತಿರುವ ಬೋರೇಗೌಡರನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಜನ ಕೂಡ ಪ್ರೀತಿಯಿಂದ ಅವರು ಓಡಿಸುತ್ತಿದ್ದ ಬಸ್ಸನ್ನು ಬೋರೇಗೌಡರ ಬಸ್ ಅಂತಾನೆ ಕರೆಯುತ್ತಿದ್ದರು. ಬೋರೇಗೌಡರು ಮುಖ್ಯಮಂತ್ರಿಗಳ ಚಿನ್ನದ ಪದಕ ಸೇರಿದಂತೆ ತಾಲೂಕು ಆಡಳಿತದ ಗೌರವಕ್ಕೆ ಪಾತ್ರರಾಗಿದ್ದಾರೆ.

ಗೌಡರ ಮಾದರಿಯನ್ನು ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗಳು ಅನುಸರಿಸಿದರೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಸಂಸ್ಥೆಯನ್ನು ನಷ್ಟದಿಂದ ತಪ್ಪಿಸಿ ಲಾಭದಾಯಕವಾಗಿ ಮುನ್ನಡೆಸಬಹುದು ಎಂದು ಡಿಪೋ ಮ್ಯಾನೇಜರ್ ಶಿವಕುಮಾರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕರ್ತವ್ಯದಿಂದ ನಿವೃತ್ತರಾದ ಚಾಲಕ ಬೋರೇಗೌಡರಿಗೆ ಮಂಡ್ಯ ಜಿಲ್ಲೆಯ ಜನ ಪ್ರೀತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *