ಬೂತ್‍ಗಳಿಗೆ ಹಣ ನೀಡಿಲ್ಲ- ಸಚಿವರ ಕೊಠಡಿಯಲ್ಲೇ ಕಿತ್ತಾಡಿಕೊಂಡ ಕೈ ಮುಖಂಡರು

Public TV
1 Min Read

ಬಳ್ಳಾರಿ: ಲೋಕಸಭಾ ಉಪಚುನಾವಣೆಯಲ್ಲಿ ಬೂತ್‍ಗಳಿಗೆ ಹಣ ನೀಡಿಲ್ಲವೆಂದು ವಸತಿ ಸಚಿವ ಯು.ಟಿ.ಖಾದರ್ ತಂಗಿದ್ದ ರೂಮಿನಲ್ಲೇ ಕಾಂಗ್ರೆಸ್ ಮುಖಂಡರು ಪರಸ್ಪರ ಕಿತ್ತಾಡಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೌದು, ಬಳ್ಳಾರಿ ಲೋಕಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ಅಖಾಡಕ್ಕೆ ಧುಮುಕಿದ್ದು, ಸರ್ಕಾರದ ಸಚಿವರು ಭಾರೀ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಚಾರದ ಹಿನ್ನೆಲೆ ಹಾಗೂ ಬಳ್ಳಾರಿ ನಗರದ ಉಸ್ತುವಾರಿಯನ್ನು ಹೊಂದಿದ್ದ ಯುಟಿ ಖಾದರ್ ನಕ್ಷತ್ರ ಹೋಟೆಲ್‍ನ ಕೊಠಡಿ ಸಂಖ್ಯೆ 401ರಲ್ಲಿ ತಂಗಿದ್ದರು.

ಇಂದು ಸಚಿವರು ತಂಗಿದ್ದ ಕೊಠಡಿಗೆ ಆಗಮಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾದರ್ ಸಮ್ಮುಖದಲ್ಲೇ ಕಿತ್ತಾಡಿಕೊಂಡಿದ್ದಾರೆ. ಬೂತ್‍ಗಳಿಗೆ ಸರಿಯಾಗಿ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಪರಸ್ಪರ ಕೈ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಕೈ ಕೈ ಮಿಲಾಯಿಸಲು ಸಹ ಮುಂದಾಗಿದ್ದರು. ಒಬ್ಬರಿಗೊಬ್ಬರು ರಿವೇಂಜ್ ತೆಗೆದುಕೊಳ್ಳುವ ಮಟ್ಟಕ್ಕೆ ಜಗಳ ತಾರಕಕ್ಕೇರಿತ್ತು. ಸಿಟ್ಟಿಗೆದ್ದ ಮುಖಂಡರನ್ನು ಸಮಾಧಾನಪಡಿಸಲು ಕೈ ನಾಯಕರ ಹರಸಾಹಸವನ್ನು ಪಟ್ಟಿದ್ದರು. ಪ್ರಮುಖವಾಗಿ ಮಹಿಳಾ ಮುಖಂಡರು ಹೆಚ್ಚಿನ ಅಸಮಾಧಾನವನ್ನು ಹೊರಹಾಕಿದ್ದರು ಎಂದು ಹೇಳಲಾಗುತ್ತಿದೆ.

ಇದರ ನಡುವೆ ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಮೀನಾಕ್ಷಿ ಎಂಬವರು, ಕಾಂಗ್ರೆಸ್ ಪರ ಕೆಲಸ ಮಾಡಲು ಹಣ ಪಡೆಯಲು ಸಚಿವರ ಕೊಠಡಿಯಲ್ಲಿ ಇದ್ದರು ಎನ್ನಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಚಿವ ಯು ಟಿ ಖಾದರ್ ರೂಮ್ ನಲ್ಲಿಯೇನು ಕೆಲಸ? ಎಂಬ ಮಾತುಗಳ ಸಹ ಕೇಳಿಬರುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *