ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು: ಸಿಎಂ ಎಚ್‍ಡಿಕೆ

Public TV
2 Min Read

ಮಡಿಕೇರಿ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾಗಿರುವ ಎಚ್.ಡಿ.ದೇವೇಗೌಡ ಮತ್ತೊಮ್ಮೆ ಪ್ರಧಾನಿಯಾದರೂ, ಆಗಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಹಾ ಮಳೆಗೆ ಕೊಡಗು ತತ್ತರಿಸಿ ಹೋಗಿದ್ದು, ಇಂದು ಖುದ್ದು ಸಿಎಂ ಎಚ್‍ಡಿಕೆ ಪ್ರವಾಹ ಸಂತ್ರಸ್ತರ ಜೊತೆ ಸಂವಾದ ಕಾರ್ಯಕ್ರಮ ನಡೆಸಿದ್ದರು. ಸಂವಾದ ಕಾರ್ಯಕ್ರಮದ ನಂತರ ದೇವೇಗೌಡರು ಪ್ರಧಾನಿ ಆಗುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದವರು ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ಅಲ್ಲದೇ ದೇಶದಲ್ಲಿ ತೃತೀಯ ರಂಗ ಬರುವ ವಾತಾವರಣ ಕಾಣಿಸುತ್ತಿದೆ. ಹೀಗಾಗಿ ದೇವೇಗೌಡರೂ ಮತ್ತೊಮ್ಮೆ ಪ್ರಧಾನಿ ಆದರೂ ಆಗಬಹುದು. ಅಲ್ಲದೇ ಇದೇ ರೀತಿಯ ವಿಶ್ಲೇಷಣೆಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂತ್ರಸ್ತರು ನೀಡಿದ್ದ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಆಶ್ವಾಸನೆ ನೀಡಿದ ಅವರು ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 6 ಲಕ್ಷ ರೂಪಾಯಿ ಮೌಲ್ಯದ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ. ಮನೆ ಕಾರ್ಯ ವಿಳಂಬವಾದರೆ, ಅಂತಹವರಿಗೆ ಮನೆ ಬಾಡಿಗೆಗೆ ಹಣವನ್ನು ಸಹ ನೀಡಲಾಗುವುದು. ಈಗಾಗಲೇ 122 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದೇವೆ. ಅಲ್ಲದೇ ಇಲ್ಲಿಯವರೆಗೂ ಸಿಎಂ ನಿಧಿಗೆ ಬಂದ ಹಣವನ್ನು ಕೊಡಗಿಗೆ ಕೊಟ್ಟಿಲ್ಲವೆಂದು ತಿಳಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ವಿಚಾರದ ಬಗ್ಗೆ ಮಾತನಾಡಿ, ಲೋಕಸಭಾ ಚುನಾವಣೆಯವರೆಗೂ, ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಆಗಬಾರದೆಂದು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ನವೆಂಬರ್ 1ರಿಂದ ಈ ಯೋಜನೆ ಕಡ್ಡಾಯವಾಗಿ ಜಾರಿಗೆ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದಿಂದ ವರ್ಗಾವಣೆ ದಂಧೆ ನಡೆಯುತ್ತಿದೆ ಎನ್ನುವ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ಸಮ್ಮಿಶ್ರ ಸರ್ಕಾರ ಪೇಮೆಂಟ್ ಆಧಾರದ ಮೇಲೆ ವರ್ಗಾವಣೆ ನಡೆಯುತ್ತಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ನಮ್ಮ ಸರ್ಕಾರವು ಮೆರಿಟ್ ಆಧಾರದ ಮೇಲೆ ವರ್ಗಾವಣೆ ನಡೆಯುತ್ತಿದೆ ಎಂದ್ರು.

ಮೊದಲು ಬೆಂಗಳೂರನ್ನು ಕ್ಲೀನ್ ಮಾಡಬೇಕಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಅಲ್ಲದೇ ಪ್ರಮುಖ ನಿಷ್ಠಾವಂತ ಅಧಿಕಾರಿಗಳನ್ನು ರಾಜಧಾನಿಗೆ ವರ್ಗಾಯಿಸಿದ್ದೇನೆ. ಯಡಿಯೂರಪ್ಪನವರ ಬಗ್ಗೆ ಏನೂ ಮಾತನಾಡಲ್ಲ, ಅವರ ಬಗ್ಗೆ ಮಾತನಾಡಿದರೆ, ಸುಮ್ಮನೆ ಸಮಯ ವ್ಯಥ್ರ್ಯ ಆಗುತ್ತೆ ಎಂದು ವ್ಯಂಗ್ಯವಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *