ಹೈಸ್ಕೂಲ್ ಪ್ರಾಂಶುಪಾಲರ ಕೊಲೆ ಪ್ರಕರಣ: ಆರೋಪಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

Public TV
1 Min Read

ಬೆಂಗಳೂರು: ಹಾಡಹಗಲೇ ಅಗ್ರಹಾರ ದಾಸರಹಳ್ಳಿಯ ಬಳಿ ಪ್ರಾಂಶುಪಾಲರನ್ನು ಹತ್ಯೆಮಾಡಿದ್ದ ಆರೋಪಿಯನ್ನು ಮಾಗಡಿ ರೋಡ್ ಪೊಲೀಸರು ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಶಾಲೆಯಲ್ಲಿ, ವಿಶೇಷ ತರಗತಿ ನಡೆಸುತ್ತಿದ್ದ ಪ್ರಾಂಶುಪಾಲ ರಂಗನಾಥ್ ರವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾಗಡಿ ರೋಡ್ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದರು.

ಪ್ರಾಂಶುಪಾಲರ ಹತ್ಯೆಯಲ್ಲಿ ಬಬ್ಲಿ ಅಲಿಯಾಸ್ ಮುನಿರಾಜು ಪ್ರಮುಖ ಆರೋಪಿಯಾಗಿದ್ದನೆಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿ ಬಬ್ಲಿ ಮಹಾಲಕ್ಷ್ಮೀ ಲೇಔಟ್‍ನ ಕಿರ್ಲೋಸ್ಕರ್ ಪೌಂಡ್ರಿ ಬಳಿ ಇರುವುದನ್ನು ಪತ್ತೆ ಹಚ್ಚಿ ದಾಳಿ ನಡೆಸಿದ್ದರು. ದಾಳಿ ವೇಳೆ ಪೊಲೀಸರ ಮೇಲೆಯೇ ಬಬ್ಲಿ ಹಲ್ಲೆಗೆ ಯತ್ನಿಸಿದ್ದನು. ಕೂಡಲೇ ಎಚ್ಚೆತ್ತ ಮಾಗಡಿ ರೋಡ್ ಇನ್ಸ್‍ಪೆಕ್ಟರ್ ಹೇಮಂತ್ ಕುಮಾರ್ ಆತ್ಮ ರಕ್ಷಣೆಗಾಗಿ ಬಬ್ಲಿ ಮೇಲೆ ಫೈರಿಂಗ್ ಮಾಡಿದ್ದರು.

ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ಆರೋಪಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳ ಎದುರೇ ಬೆಂಗಳೂರು ಹೈಸ್ಕೂಲ್ ಪ್ರಾಂಶುಪಾಲರ ಬರ್ಬರ ಹತ್ಯೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *