ಸಭೆ ನಡುವೆಯೇ ಡಿಸಿಎಂಗೆ ಫೋನ್ ಮಾಡಿ ಅಸಮಾಧಾನ ಹೊರಹಾಕಿದ ರೇವಣ್ಣ!

Public TV
1 Min Read

ತುಮಕೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮಾವತಿ ಸಲಹಾ ಸಮಿತಿ ಸಭೆ ನಡುವೆಯೇ ಸಮ್ಮಿಶ್ರ ಸರ್ಕಾರದ ಡಿಸಿಎಂ ಪರಮೇಶ್ವರ್ ಅವರಿಗೆ ಫೋನ್ ಮಾಡಿದ ಲೋಕೋಪಯೋಗಿ ಸಚಿವ ರೇವಣ್ಣ ತಮ್ಮ ಫೋನ್ ಕರೆಗೆ ಉತ್ತರಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಬರಬೇಕಾಗಿದ್ದ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರನ್ನು ಆಧಾರಿಸಿ ಪಬ್ಲಿಕ್ ಟಿವಿ ವರದಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ತರಾತುರಿಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಆದರೆ ಸಭೆಗೆ ಹಾಜರಾಗುವಂತೆ ತಿಳಿಸಲು ಲೋಕೋಪಯೋಗಿ ಸಚಿವ ರೇವಣ್ಣ ಅವರು ಹಲವು ಬಾರಿ ಪರಮೇಶ್ವರ್ ಅವರಿಗೆ  ಕರೆ ಮಾಡಿದ್ದಾರೆ. ಆದರೆ ರೇವಣ್ಣ ಅವರ ಕರೆಗೆ ಡಿಸಿಎಂ ಉತ್ತರಿಸದೇ ಮುನಿಸಿಕೊಂಡಿದ್ದರು ಎನ್ನಲಾಗಿದೆ.

ಕರೆ ಸ್ವೀಕರಿಸದ್ದಕ್ಕೆ ಅಸಮಾಧಾನಗೊಂಡ ರೇವಣ್ಣ ಅವರು ಇಂದು ಸಭೆಯ ನಡುವೆಯೇ ಪರಮೇಶ್ವರ್ ಅವರಿಗೆ ಕರೆ ಮಾಡಿ ಗಮನಸೆಳೆದರು. “ಅಣ್ಣಾ ನಾನು ನಿಮಗೆ ನಿನ್ನೆ ಮೂರ್ನಾಲ್ಕು ಬಾರಿ ಫೋನ್ ಮಾಡಿದ್ದೆ, ನೀವು ರಿಸೀವ್ ಮಾಡಲೇ ಇಲ್ಲ. ಬೇಕಾದರೆ ನಿಮ್ಮವರನ್ನು ಕೇಳಿ ನೋಡಿ” ಎಂದು ನಯವಾಗಿಯೇ ಅಸಮಾಧಾನ ಹೊರಹಾಕಿದರು.

ಉಳಿದಂತೆ ಸಭೆಯಲ್ಲಿ ತುಮಕೂರಿಗೆ ನೀರಾವರಿ ವಿಚಾರದಲ್ಲಿ ಯಾವುದೇ ಅನ್ಯಾಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ರೇವಣ್ಣ ಅವರು, 24.5 ಟಿಎಂಸಿ ನೀರಿನಲ್ಲಿ ಈಗಾಗಲೇ 14 ಟಿಎಂಸಿ ನೀರು ಬಿಡಲಾಗಿದೆ. ಮುಂದೆಯೂ ನೀರು ಹರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ತಮ್ಮ ವಿರುದ್ಧ ಆರೋಪ ಮಾಡಿದ ಮಾಜಿ ಸಂಸದ ಜಿ.ಎಸ್. ಬಸವರಾಜು ಅವರನ್ನು ಲೇವಡಿ ಮಾಡಿದ್ದ ರೇವಣ್ಣ, ಇನ್ನು ಮುಂದೆ ಜಿ.ಎಸ್.ಬಸವರಾಜು ನೀರುಗಂಟಿಯಾಗಿ ಕೆಲಸ ಮಾಡಲಿ. ಅವರಿಗೆ ಡ್ಯಾಂ ಕೀ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *