ಬಣ್ಣದ ಲೋಕದಿಂದ ದೂರ ಸರಿಯೋ ಸುಳಿವು ನೀಡಿದ ಅಂಬರೀಶ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಚಿತ್ರರಂಗದಿಂದ ಹಿಂದೆ ಸರಿಯುವ ಸೂಚನೆ ನೀಡಿದ್ದಾರೆ. ಹೌದು, ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ತಮ್ಮ ಕೊನೆಯ ಸಿನಿಮಾ ಆಗಲಿದೆ ಎಂದು ಅಂಬರೀಶ್ ಹೇಳಿದ್ದಾರೆ.

ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಈ ಚಿತ್ರ ಮಾಡುವಾಗಲೇ ಕರೆ ಮಾಡಿ ಅಂಬರೀಶ್ ನೀನು ಈ ಚಿತ್ರ ಮಾಡು ಎಂದು ಹೇಳಿದ್ದರು. ಆದರೆ ಈ ವೇಳೆ ನಾನು ಸುಮ್ಮನೆ ಇರಪ್ಪ ಅಂದಿದ್ದೆ. ಬಳಿಕ ಆ ಸಿನಿಮಾ ನೋಡಿ ಒಪ್ಪಿಕೊಂಡೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಬಹಳ ಇಷ್ಟ ಆಯ್ತು ಎಂದ್ರು.

ಈ ವೇಳೆ ಪತ್ರಕರ್ತರಿಂದ ತೂರಿಬಂದ ನಿಮ್ಮ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿ, ಇದೇ ನನ್ನ ಕೊನೆ ಸಿನಿಮಾ ಅಂತಾ ಹೇಳಬಹುದು. ಏಕೆಂದರೆ ಈ ಹಿಂದೆ ವಿಷ್ಣುವರ್ಧನ್ ಅವರೊಂದಿಗೆ ದಿಗ್ಗಜರು ಸಿನಿಮಾ ಮಾಡಿದ್ದೆ. ಆದಾದ ಬಳಿಕ ಸಾಕಷ್ಟು ಮಂದಿ ಮತ್ತೆ ಸಿನಿಮಾ ಮಾಡಲು ಬಂದರು. ಆದನ್ನು ನಿರಾಕರಿಸಿದ್ದೆ. ಏಕೆಂದರೆ ದಿಗ್ಗಜರು ಸಿನಿಮಾ ಮೀರಿಸುವ ಕಥೆ ಬಂದಿರಲಿಲ್ಲ. ಒಂದೊಮ್ಮೆ ಉತ್ತಮ ಪಾತ್ರ ಬಂದರೆ ಮುಂದೆ ಮಾಡಬಹುದು. ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಂತಹ ಕಥೆಯ ಪಾತ್ರ ಮುಂದೆ ಬರಲ್ಲ ಅಂದುಕೊಂಡಿದ್ದೇನೆ ಎಂದು ಹೇಳಿದರು.

ಸಿನಿಮಾ ಪ್ರತಿಯೊಂದು ಸನ್ನಿವೇಶ ಅತ್ಯುತ್ತಮವಾಗಿ ಮೂಡಿಬಂದಿದೆ. ಚಿತ್ರದ ಪ್ರತಿಯೊಂದು ಪಾತ್ರವೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಈ ಸಿನಿಮಾ ಮಾಡಲು ಮೊದಲು ಸಿನಿಮಾ ಮಾಡಲು ನಿರ್ದೇಶಕರೊಬ್ಬರು ಕೇಳಿದ್ದರು. ಆದರೆ ಕೆಲ ಕಾರಣಗಳಿಂದ ನಿರ್ದೇಶಕರು ಬದಲಾದರು. ಆಗ ಸುದೀಪ್ ಅವರು ಯುವ ಅಸೋಸಿಯೇಟ್ ಡೈರೆಕ್ಟರ್ ಗುರುದತ್ ಅವರ ಪ್ರಸ್ತಾಪವಿಟ್ಟರು. ಇದಕ್ಕೆ ಒಪ್ಪಿ ಸಿನಿಮಾ ಆರಂಭಿಸಿದೆ. ಮೊದಲ ದಿನವೇ ನನಗೆ ಯುವ ನಿರ್ದೇಶಕರ ಕಾರ್ಯ ಇಷ್ಟ ಆಯಿತು. ಹೆದರಿಕೊಂಡು ಸಿನಿಮಾ ಮಾಡಬೇಡ ಅಂತಾ ಧೈರ್ಯ ತುಂಬಿದೆ. ಸುಹಾಸಿನಿ ಅವರು ಚಿತ್ರದ ಕೈ ಹಿಡಿದಿದ್ದಾರೆ. ಅವರ ಜೊತೆ ಚಿತ್ರ ಮಾಡಿರುವುದು ಸಂತಸ ತಂದಿದೆ. ಎಲ್ಲರೂ ಬಾಹುಬಲಿ ಮಾಡೋದಕ್ಕೆ ಆಗಲ್ಲ, ಚಿಕ್ಕ ಚಿಕ್ಕ ಶಾಟ್ ಆದರೂ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದರು.

ಇದೇ ತಿಂಗಳ 27ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ಬಹುಭಾಷಾ ನಟಿ ಸುಹಾಸಿನಿ ಸೇರಿದಂತೆ ಶೃತಿ ಹರಿಹರನ್, ವೀಣಾ ಪೊನ್ನಪ್ಪ, ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಚಿತ್ರ ತಂಡದ ಪ್ರಮುಖರು ಭಾವಹಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *