ಬೈಕ್ ಸಮೇತ ಮೂವರು ಹೇಮಾವತಿ ಕಾಲುವೆಗೆ ಬಿದ್ರು – ಪತ್ನಿ ಸಾವು

Public TV
2 Min Read

– ನಾನೇ ಕೊಲೆ ಮಾಡಿದ್ದು ಅಂದ ಪತಿ

ಹಾಸನ: ಸಂಬಂಧಿಕರ ಮನೆಗೆ ಹೋಗಿ ಬೈಕಿನಲ್ಲಿ ಬರುತ್ತಿದ್ದಾಗ ಪತಿ, ಪತ್ನಿ ಹಾಗೂ ಮಗು ಜಿಲ್ಲೆಯ ಹೇಮಾವತಿ ಕಾಲುವೆಗೆ ಬೈಕಿನೊಂದಿಗೆ ಬಿದ್ದಿದ್ದಾರೆ. ಘಟೆನೆಯಲ್ಲಿ ಪತಿ ಮತ್ತು ಮಗು ಸುರಕ್ಷಿತವಾಗಿದ್ದು, ಪತ್ನಿ ಮೃತಪಟ್ಟಿದ್ದಾರೆ. ಇದೀಗ ಈಕೆಯ ಪೋಷಕರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ.

ಸುಮಾ ಮೃತ ದುರ್ದೈವಿ. 10 ವರ್ಷಗಳ ಹಿಂದೆ ತುಮಕೂರು ಮೂಲದ ಶಿವಣ್ಣನಿಗೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ನಿಂಬಿಹಳ್ಳಿ ಗ್ರಾಮದ ಸುಮಾಳಿಗೆ ಮದುವೆಯಾಗಿತ್ತು. ಮದುವೆ ನಂತರ ಅನ್ಯೋನ್ಯವಾಗಿಯೇ ಇದ್ದರು. ಪತಿ ಶಿವಣ್ಣ ಮೊದಲೊಂದು ಮದುವೆ ಆಗಿ ಪತ್ನಿಯನ್ನು ತೊರೆದಿದ್ದನು. ಇತ್ತ ಸುಮಾಳಿಗೂ ಸಹ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದರು. ಹೀಗಾಗಿ ಶಿವಣ್ಣನಿಗೆ ಸುಮಾಳನ್ನು ಮದುವೆ ಮಾಡಿಕೊಡಲಾಗಿತ್ತು.

ಬೆಂಗಳೂರಿನಲ್ಲಿ ಪತ್ನಿ ಜೊತೆ ವಾಸವಿದ್ದ ಶಿವಣ್ಣ ನಿಂಬೀಹಳ್ಳಿಗೆ ಬಂದಿದ್ದರು. ಶುಕ್ರವಾರ ಸಂಬಂಧಿಕರ ಮನೆಗೆ ಊಟಕ್ಕೆ ಹೊರಟಿದ್ದವರು ಚನ್ನರಾಯಪಟ್ಟಣ ವಡ್ಡರಹಳ್ಳಿ ಗ್ರಾಮದ ಬಳಿ ಹೇಮಾವತಿ ಕಾಲುವೆಗೆ ಬೈಕಿನೊಂದಿಗೆ ಬಿದ್ದಿದ್ದಾರೆ. ಆದರೆ ಮಗು ಮತ್ತು ಶಿವಣ್ಣನಿಗೆ ಸೀರೆ ಎಸೆದು ಕಾಪಾಡಿದ್ದಾರೆ. ಸುಮಾ ಮಾತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶಿವಣ್ಣ ಪತ್ನಿಯನ್ನು ಸ್ವತಃ ನಾನೇ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಕೊಲೆಗೆ ಕಾರಣವೇನು ಎಂದರೆ ಗೊಂದಲ ಹೇಳಿಕೆ ನೀಡುತ್ತಿದ್ದಾನೆ. ಪತಿ ಶಿವಣ್ಣನಿಗೆ ಅನೈತಿಕ ಸಂಬಂಧ ಇತ್ತು ಅದು ಸುಮಾಳಿಗೆ ಗೊತ್ತಾಗಿದೆ. ಅದಕ್ಕೆ ನಮ್ಮ ಮಗಳನ್ನು ಕೊಂದು ಹಾಕಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಇತ್ತ ಸುಮಾಳಿಗೂ ಅನೈತಿಕ ಸಂಬಂಧ ಇದೆ. ಅದು ನನಗೆ ಗೊತ್ತಾಗಿದೆ. ಆದ್ದರಿಂದ ನಾನೇ ಅವಳನ್ನು ಕೊಂದೆ ಎಂದು ಪತಿ ಹೇಳಿದ್ದಾನೆ. ಆದರೆ ಯಾರಿಗೆ ಅನೈತಿಕ ಸಂಬಂಧ ಇತ್ತು ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಜೊತೆಗೆ ಇಬ್ಬರಿಗೂ ಎರಡನೇ ಮದುವೆ ಇದಾಗಿದ್ದು, ಇಬ್ಬರೂ ಅನೈತಿಕ ಸಂಬಂಧಕ್ಕೆ ಜಗಳವಾಡುತ್ತಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.

ಬೈಕಿನಲ್ಲಿ ಹೋಗುತ್ತಿದ್ದ ಪತಿ, ಪತ್ನಿ ಮತ್ತು ಮಗು ನೀರಿಗೆ ಬಿದ್ದವರಲ್ಲಿ ಇಬ್ಬರನ್ನು ಸೀರೆ ಹಾಕಿ ಜೀವ ಉಳಿಸಿದವರು ಯಾರು. ಇಬ್ಬರನ್ನು ಉಳಿಸಿದವರು ಸುಮಾಳನ್ನು ಯಾಕೆ ಉಳಿಸಿಲ್ಲ ಎನ್ನುವುದೂ ಕೂಡ ಪ್ರಶ್ನೆಗೆ ಕಾರಣವಾಗಿದೆ.

ಈ ಪ್ರಕರಣ ಕುರಿತು ಚನ್ನರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *