ಮಲ್ಯ, ಅರುಣ್ ಜೇಟ್ಲಿ ಭೇಟಿ ಮಾಡಿದ್ದನ್ನ ಕಾಂಗ್ರೆಸ್ ಎಂಪಿ ನೋಡಿದ್ದಾರೆ: ರಾಹುಲ್ ಗಾಂಧಿ

Public TV
2 Min Read

ನವದೆಹಲಿ: ಬ್ಯಾಂಕ್‍ಗಳಿಗೆ ಬಹುಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ವಿಜಯ್ ಮಲ್ಯ ತಾನು ದೇಶ ಬಿಡುವ ಮುನ್ನ ಹಣಕಾಸು ಸಚಿವರೊಂದಿಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಹೇಳಿಕೆ ಸಂಬಂಧ ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ರಾಹುಲ್ ಗಾಂಧಿ, ವಿಜಯ್ ಮಲ್ಯ ಹಾಗೂ ಅರುಣ್ ಜೇಟ್ಲಿ ಒಟ್ಟಿಗೆ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡುತ್ತಿದ್ದನ್ನು ನಮ್ಮ ಸಂಸದ ಕಣ್ಣಾರೆ ನೋಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ವಿಜಯ್ ಮಲ್ಯ ದೇಶ ಬಿಟ್ಟು ಹೋಗುವ ಕುರಿತು ಅರುಣ್ ಜೇಟ್ಲಿ ಅವರಿಗೆ ಮಾಹಿತಿ ಇದ್ದರೂ ಕೇಂದ್ರ ತನಿಖಾ ಸಂಸ್ಥೆಗಳಿಗೆ ಏಕೆ ಮೊದಲೇ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸುಮಾರು 5-7 ನಿಮಿಷ ಕಾಲ ಅರುಣ್ ಜೇಟ್ಲಿ ಹಾಗೂ ಮಲ್ಯ ಮಾತುಕತೆ ನಡೆಸಿದ್ದಾರೆ. ಆದರೆ ಕೇಂದ್ರ ಸಚಿವರು ಸುಳ್ಳು ಹೇಳುತ್ತಿದ್ದು, ದೇಶದ ಜನತೆಗೆ ಈ ಕುರಿತು ಮಾಹಿತಿ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೇ ಈ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಕೇಂದ್ರ ಸಂಸದ ಪಿಎಲ್ ಪೂನಿಯಾ, ಪಾರ್ಲಿಮೆಂಟ್ ಹೌಸ್ ಸೆಂಟ್ರಲ್ ಹಾಲ್‍ನಲ್ಲಿ ಜೇಟ್ಲಿ ಹಾಗೂ ಮಲ್ಯ ಕುಳಿತು ಮಾತನಾಡಿದನ್ನು ನಾನು ನೋಡಿದ್ದೇನೆ. ಸುಮಾರು 5 ರಿಂದ 7 ನಿಮಿಷಗಳ ಕಾಲ ಇಬ್ಬರು ಮಾತುಕತೆ ನಡೆಸಿದರು. ಮಲ್ಯ ಅವರೇ ಜೇಟ್ಲಿರನ್ನು ಭೇಟಿ ಮಾಡಿ ಮಾತನಾಡಲು ಪಾರ್ಲಿಮೆಂಟ್ ಹೌಸ್‍ಗೆ ಮೊದಲ ಬಾರಿಗೆ ಬಂದಿದ್ದರು. ಮಾರ್ಚ್ 3ರ ಬಳಿಕ ಮಲ್ಯ ಲಂಡನ್‍ಗೆ ಪರಾರಿಯಾಗಿದ್ದು, ಇದಕ್ಕೂ 2 ದಿನ ಮುನ್ನ ಈ ಮಾತುಕತೆ ನಡೆದಿದೆ ಎಂದು ಹೇಳಿದರು.

ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಲ್ಯ, ನಾನು ದೇಶ ತೋರೆಯುವ ಮುನ್ನ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದರು. ಮಲ್ಯ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯರ ಭೇಟಿಗೆ ನಾನು ಅವಕಾಶವನ್ನೇ ನೀಡಿಲ್ಲ. ಅಲ್ಲದೇ ರಾಜ್ಯಸಭಾ ಸದಸ್ಯರಾಗಿ ತಮ್ಮ ಅಧಿಕಾರ ದೂರುಪಯೋಗ ಮಾಡಿಕೊಂಡು ಅವರೇ ಭೇಟಿಗೆ ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಅವಕಾಶ ನೀಡಿಲ್ಲ ಎಂದು ಜೇಟ್ಲಿ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *