ಮೈಸೂರಿನಲ್ಲಿ ಎರಡು ಕಡೆ ಮಾದರಿಯುತವಾಗಿ ಗೌರಿ, ಗಣೇಶ ಹಬ್ಬ ಆಚರಣೆ

Public TV
1 Min Read

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇಂದು ಎರಡು ಕಡೆಗಳಲ್ಲಿ ಮಾದರಿಯುತವಾಗಿ ಗೌರಿ – ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು.

ಇಂದು ಎಲ್ಲೆಡೆ ಗೌರಿ ಹಬ್ಬದ ಸಂಭ್ರಮ. ಮನೆಗಳಲ್ಲಿ ವಿಜೃಂಭಣೆಯಿಂದ ಹೆಣ್ಣು ಮಕ್ಕಳ ಹಬ್ಬ ಆಚರಿಸಿ ಸಂಭ್ರಮ ಪಡುತ್ತಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಎಲ್ಲರಿಗೂ ಮಾದರಿ ಆಗುವ ರೀತಿಯಲ್ಲಿ ಹಬ್ಬ ಆಚರಿಸಲಾಗಿದೆ. ಪ್ರತಿ ನಿತ್ಯ ಮೈಸೂರಿನ ರಸ್ತೆಗಳ ಸ್ವಚ್ಛ ಮಾಡುವ ಮಹಿಳೆಯರಿಗೆ ಬಾಗಿನ ಅರ್ಪಿಸಿ ಹಬ್ಬ ಮಾಡಲಾಯಿತು. ಮತ್ತೊಂದು ಕಡೆ ಮುಸ್ಲಿಂ ಯುವಕರು ಹಿಂದೂ ಯುವಕರ ಜೊತೆಯಾಗಿ ಹಬ್ಬ ಆಚರಿಸಿ ಭಾವೈಕ್ಯಕ್ಕೆ ಸಂದೇಶ ಸಾರಿದರು.

ಮೈಸೂರಿನ ಚಾಮುಂಡಿಪುರಂನ ಪಾರ್ಕ್ ನಲ್ಲಿ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಪೌರ ಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿದರು. ಸೀರೆ, ಹಣ್ಣು, ಎಲೆ, ಕಾಯಿ ಇಟ್ಟು ಪೌರಕಾರ್ಮಿಕರ ಮಹಿಳೆಯರಿಗೆ ಹಬ್ಬದ ಸಂಭ್ರಮ ಹಂಚಲಾಯಿತು.

ಮೈಸೂರಿನ ಪ್ರಜ್ವಾವಂತ ಯುವಕರ ಒಕ್ಕೂಟದಿಂದ ಭಾವೈಕ್ಯತಾ ಹಬ್ಬ ಆಚರಿಸಲಾಯಿತು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಹಿಂದೂ- ಮುಸ್ಲಿಂ ಯುವಕರು ಜೊತೆಯಾಗಿ ಗೌರಿ- ಗಣೇಶನಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದರು.

ಒಟ್ಟಾರೆ ಮೈಸೂರಿನಲ್ಲಿ ನಡೆದ ಈ ಎರಡು ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ಸಂದೇಶ ಸಾರಿದವು. ಇಂತಹ ಆಚರಣೆಗಳು ಸಮಾಜದಲ್ಲಿ ಇನ್ನಷ್ಟು ಹೆಚ್ಚಾಗಬೇಕಿದೆ. ಆಗ ಮಾತ್ರ ಪೌರಕಾರ್ಮಿಕರನ್ನು ಕೀಳಾಗಿ ನೋಡುವ ಮನೋಭವ ನಿವಾರಣೆ ಆಗುತ್ತೆ. ಜೊತೆಗೆ ಧರ್ಮ ಧರ್ಮಗಳ ನಡುವಿನ ಸಂಘರ್ಷ ಕಡಮೆ ಆಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *