ಮತ್ತೊಂದು ಮಂಗಳ ಕಾರ್ಯಕ್ಕೆ ಸಾಕ್ಷಿಯಾದ ಮಡಿಕೇರಿ ಕಾಳಜಿ ಕೇಂದ್ರ

Public TV
2 Min Read

ಮಡಿಕೇರಿ: ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಪ್ರವಾಹದಿಂದ ನಿಂತುಹೋಗಿದ್ದ ಮದುವೆಯನ್ನು ಕೂಡ ಪರಿಹಾರ ಕೇಂದ್ರ ನಡೆಸಿತ್ತು. ಈಗ ಮತ್ತೊಂದು ಮಂಗಳ ಕಾರ್ಯಕ್ಕೆ ಮಡಿಕೇರಿ ಪರಿಹಾರ ಕೇಂದ್ರ ಸಾಕ್ಷಿಯಾಗಿದೆ.

ಪರಿಹಾರ ಕೇಂದ್ರ ಕೊಡಗಿನ ಮಕ್ಕಂದೂರಿನ ರಂಜಿತಾ ಹಾಗೂ ಕೇರಳದ ಕಣ್ಣೂರಿನ ರಂಜಿತ್ ವಿವಾಹವನ್ನು ನೆರವೇರಿಸಿದೆ. ಕೊಡಗಿನಲ್ಲಿ ಜನಪ್ರಳಯವಾಗಿದ್ದರಿಂದ ರಂಜಿತಾ ಮದುವೆ ನಿಂತು ಹೋಗಿತ್ತು. ಇತ್ತ ನಿಗಧಿಯಾಗಿದ್ದ ಮದುವೆ ನಡೆಯುತ್ತದೋ ಇಲ್ಲವೋ ಅಂತ ಕುಟುಂಬದವರು ಆತಂಕದಲ್ಲಿದ್ದರು. ಆದರೆ ಪರಿಹಾರ ಕೇಂದ್ರದಿಂದ ಜಲಪ್ರಳಯಕ್ಕೆ ಸಿಲುಕಿದ್ದ ರಂಜಿತಾಳಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಇದನ್ನೂ ಓದಿ: ಪ್ರವಾಹದಿಂದ ರದ್ದಾದ ಮದುವೆಗೆ ಮರುಜೀವ ನೀಡಿದ ಸಂಘಟನೆಗಳು!

ರಂಜಿತಾ ಮತ್ತು ಕುಟುಂಬ ಭೂ ಕುಸಿತದಿಂದ ಮನೆ ಕಳೆದುಕೊಂಡಿದ್ದರು. ಬಳಿಕ ಮನೆ ಮಠ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ರಂಜಿತಾಳ ಮದುವೆಗೆ ಸಹಾಯದ ಮಹಾಪೂರ ಹರಿದುಬಂದಿತ್ತು. ಆದ್ದರಿಂದ ಇಂದು ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ವಿವಾಹ ಮಹೋತ್ಸವ ನಡೆದಿದ್ದು, ಬೆಳಗ್ಗೆ 10:30 ಗಂಟೆಗೆ ಓಂಕಾರೇಶ್ವರ ದೇವಾಲಯದಲ್ಲಿ ಈ ಜೋಡಿ ದಾಪಂತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇಂದು ಮಧ್ಯಾಹ್ನ 12:30 ಗಂಟೆಗೆ ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಕೂಡ ಆಯೋಜನೆ ಮಾಡಲಾಗಿದೆ. ಪರಿಹಾರ ಕೇಂದ್ರದಲ್ಲಿ ರಂಜಿತಾಳ ಮದುವೆ ಮೂರನೇ ಮದುವೆಗೆ ಸಾಕ್ಷಿಯಾಗಿದೆ. ಈ ಹಿಂದೆ ಮಂಜುಳಾ ಮತ್ತು ವಾರಿಜಾ ಯುವತಿಯರಿಗೆ ಪರಿಹಾರ ಕೇಂದ್ರಗಳು ನಿಂತು ಹೋಗಿದ್ದ ಮದುವೆಯನ್ನು ಮಾಡಿಸಿದ್ದರು.

ಸಚಿವರಿಂದ ಮಹಿಳೆಯರಿಗೆ ಬಾಗಿನ:
ಇತ್ತ ಪ್ರಾಕೃತಿಕ ವಿಕೋಪ ಪೀಡಿತ ಕೊಡಗು ಜಿಲ್ಲೆಗೆ ಇಂದು ಉಸ್ತುವಾರಿ ಸಚಿವ ಭೇಟಿ ನೀಡಲಿದ್ದು, ಗೌರಿ ಹಬ್ಬದ ಪ್ರಯುಕ್ತ ಪರಿಹಾರ ಕೇಂದ್ರದ ಮಹಿಳೆಯರಿಗೆ ಬಾಗಿನ ನೀಡಲಿದ್ದಾರೆ. ಜಲಪ್ರಳಯ ಹಾಗೂ ಭೂ ಕುಸಿತದಿಂದ ಮನೆ ಮಠ ಕಳೆದುಕೊಂಡಿರುವ ಕುಟುಂಬಗಳು, ಹಬ್ಬ ಹರಿದಿನದ ಸಂಭ್ರಮವಿಲ್ಲದೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಆದ್ದರಿಂದ ನಿರಾಶ್ರಿತ ಮಹಿಳೆಯರಿಗೆ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ರಿಂದ ಬಾಗಿನ ನೀಡಲಿದ್ದಾರೆ. ಜೊತೆಗೆ ಧೈರ್ಯ ತುಂಬಿ ಪುನರ್ವಸತಿ ಬಗ್ಗೆ ಸಭೆ ನಡೆಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *