ಬೆಳಗ್ಗೆ ಮುದುಡಿದ್ದ ಮುಖ, ಮಧ್ಯಾಹ್ನವಾಗುತ್ತಲೇ ಅರಳುವ ಮೂಲಕ ನನಗ್ಯಾವ ಚಿಂತೆ ಇಲ್ಲರೀ ಎಂದ ಸಿಎಂ

Public TV
2 Min Read

ಉಡುಪಿ: ಬೆಳಗಾವಿಯಲ್ಲಿನ ಪಿಎಲ್‍ಡಿ ಬ್ಯಾಂಕಿನ ಚುನಾವಣೆಯ ವಿಚಾರದಲ್ಲೇ ಸಿಎಂ ಕುಮಾರಸ್ವಾಮಿಯವರ ಮುಖ ಬೆಳಗ್ಗೆ ಮುದುಡಿದ್ದರೆ, ಮಧ್ಯಾಹ್ನದ ಹೊತ್ತಿಗೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಲೇ ಅರಳುವ ಹಾಗೆ ಮಾಡಿತ್ತು.

ಬೆಳಗ್ಗೆ 10 ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಸಮಯ ನಿಗದಿಯಾಗಿತ್ತು. ಎಲ್ಲಾ ಅಧಿಕಾರಿಗಳು, ಪರಿಷತ್ ವಿಪಕ್ಷದ ನಾಯಕರು, ಐದು ಶಾಸಕರು ಅರ್ಧಗಂಟೆ ಮೊದಲೇ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಿಎಂ ತಮ್ಮ ನಿರ್ಧಾರ ಬದಲಿಸಿ, ಮಣಿಪಾಲಕ್ಕೆ ಬಾರದೆ ನೇರವಾಗಿ ಕೃಷ್ಣಮಠಕ್ಕೆ ಭೇಟಿ ನೀಡಿದರು. ಕೃಷ್ಣ ಒಬ್ಬ ಚಾಣಾಕ್ಷ್ಯ ರಾಜಕಾರಣಿ. ಬೆಳಗಾವಿ ಬೆಳವಣಿಗೆಯ ಸಂದರ್ಭ ಕೃಷ್ಣನ ದರ್ಶನದಿಂದ ಯಶಸ್ಸು ಸಿಗುತ್ತದೆ ಎನ್ನುವ ಮಾತು ಇಂದು ಮಹತ್ವ ಪಡೆದಿತ್ತು.

ಕೃಷ್ಣನ ದರ್ಶನದ ನಂತರ ದೇಗುಲದಿಂದ 5 ಕಿಲೋ ಮೀಟರ್ ದೂರದ ಮಣಿಪಾಲಕ್ಕೆ ಸಿಎಂ ಆಗಮಿಸಿದರು. ಅಷ್ಟರಲ್ಲೇ ಬೆಳಗಾವಿ ಬೆಳವಣಿಗೆ ಎಲ್ಲಾ ಸುಖಾಂತ್ಯ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಭಿತ್ತರವಾಗಿತ್ತು, ಇದನ್ನು ಕೇಳಿದ ಬಳಿಕ ನಿರಾಳರಾದ ಸಿಎಂ ತಮ್ಮ ಸಭೆಯನ್ನು ಮುಂದುವರಿಸಿದರು. ಮೂರೂವರೆ ಗಂಟೆಗಳ ಕಾಲ ನಡೆದ ಸುಧೀರ್ಘ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳು, ಐದು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು, ಸರ್ಕಾರದ ಅನುದಾನದ ಬಳಕೆ ಹಾಗೂ ಹೊಸ ಆಶ್ವಾಸನೆಗಳನ್ನು ಘೋಷಣೆ ಮಾಡಿದರು. ಬೆಳಗೆ ಇದ್ದ ಗೊಂದಲ ಸಿಎಂ ಮುಖದಲ್ಲಿ ಸಂಜೆ ಕಾಣಿಸಲಿಲ್ಲ. ಕೊನೆದಾಗಿ ಹೊರಡುವ ಮುನ್ನ ನಾನು ಟೆನ್ಶನ್ ಮಾಡಿಕೊಳ್ಳುವ ಆಸಾಮಿಯೇ ಅಲ್ಲ, ನನಗ್ಯಾಕೆ ಚಿಂತೆ ಎಂದು ಹೇಳಿ ಹೊರಟರು.

ಸೆಪ್ಟೆಂಬರ್ 7 ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವು ನೀಡಿದ ದಿನ. ಬೆಳಗಾವಿಯ ಒಂದು ಗ್ರಾಮೀಣ ಬ್ಯಾಂಕ್ ಚುನಾವಣೆ ರಾಜಕೀಯ ವಲಯದಲ್ಲೇ ಸಂಚಲನ ಮೂಡಿಸಿತ್ತು. ದೋಸ್ತಿ ಸರ್ಕಾರ ಬಿದ್ದೇ ಹೋಗುತ್ತೆ ಅನ್ನುವ ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿರುವಾಗ, ಸಿಎಂ ಕುಮಾರಸ್ವಾಮಿ ಉಡುಪಿ ಶ್ರೀ ಕೃಷ್ಣನ ದರ್ಶನಗೈದು ವಿಶೇಷ ಪೂಜೆ ಸಲ್ಲಿಸಿದರು. ಮಧ್ವ ಸರೋವರದ ಪವಿತ್ರ ತೀರ್ಥ ಜಲ ಪ್ರೋಕ್ಷಣೆ ಮಾಡಿಕೊಂಡು, ಮಠದೊಳಗೆ ಬಂದು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು.

ಶ್ರೀ ಕೃಷ್ಣನನ್ನು ಆಶೀರ್ವಾದ ಪಡೆದ ಬಳಿಕ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಯನ್ನು ಭೇಟಿಯಾಗಿ ಸರ್ಕಾರ ಸುಭದ್ರವಾಗಿ ನಡೆಯುವಂತೆ ಪ್ರಾರ್ಥನೆ ಮಾಡಲು ಕೋರಿದರು. ನಾಡಿಗೂ, ನೆರೆಪೀಡಿತ ಕೊಡಗಿಗೂ ಭಗವಂತ ಶ್ರೇಯಸ್ಸು ಕೊಡಲಿ ಎಂದು ಪ್ರಾರ್ಥಿಸಿಕೊಂಡರು. ನಮ್ಮ ಕುಟುಂಬಕ್ಕೆ ದೇವರ ಮೇಲೆ ಭಕ್ತಿ ಜಾಸ್ತಿ. ಉಡುಪಿ ಕೃಷ್ಣನಲ್ಲಿ ನಾಡಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯ ಸಮೃದ್ಧವಾಗುವಂತೆ ದೇವರಲ್ಲಿ ಕೋರಿದ್ದೇನೆ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *