ಆಂಧ್ರ ಅಲ್ಲ, ಕನ್ನಡದ ಹುಡುಗಿಯನ್ನೇ ವರಿಸಲಿದ್ದಾರೆ ನಿಖಿಲ್

Public TV
2 Min Read

ಹೈದರಾಬಾದ್: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಪುತ್ರ ಎಚ್.ಕೆ. ನಿಖಿಲ್ ಗೌಡರಿಗೆ ಹುಡುಗಿ ನೋಡಲು ದೆಹಲಿಯಿಂದ ನೇರವಾಗಿ ಅಮರಾವತಿಗೆ ಪ್ರಯಾಣ ಬೆಳೆಸಿದ್ದರು ಎಂಬ ಸುದ್ದಿಗೆ ಟ್ವಿಸ್ಟ್ ಸಿಕ್ಕಿದ್ದು, ನಿಖಿಲ್‍ಗೌಡ ಅವರ ಮದುವೆ ಅಪ್ಪಟ ಕನ್ನಡಿತಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭಿಸಿದೆ.

ನಿಖಿಲ್ ಅವರಿಗೆ ಹುಡುಗಿ ನೋಡುವುದಕ್ಕಾಗಿ ಸಿಎಂ ದಂಪತಿ ಆಂಧ್ರಕ್ಕೆ ತೆರಳಿದ್ದರು ಎಂಬ ಸುದ್ದಿಯ ಬೆನ್ನಲ್ಲೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ನಿಖಿಲ್ ಅವರ ಮ್ಯಾನೇಜರ್, ಈ ಕುರಿತು ಶೀಘ್ರವೇ ಅಧಿಕೃತವಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಲಿದ್ದಾರೆ. ಆದರೆ ನಿಖಿಲ್ ಅವರು ಆಂಧ್ರ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎನ್ನುವುದು ಸುಳ್ಳು. ಅವರು ಕನ್ನಡ ಹುಡುಗಿಯನ್ನೇ ಮದುವೆಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ನವೆಂಬರ್, ಡಿಸೆಂಬರ್ ವೇಳೆಗೆ ಅಧಿಕೃತವಾಗಿ ನಿಖಿಲ್ ರ ವಿವಾಹದ ಕುರಿತು ಕುಟುಂಬಸ್ಥರು ಮಾಹಿತಿ ನೀಡಲಿದ್ದು, ಯಾವುದೇ ಸಿನಿಮಾ, ರಾಜಕೀಯ ಹಿನ್ನೆಲೆ ಇಲ್ಲದ ಕನ್ನಡದ ದೊಡ್ಡ ಮನೆತನದ ಯುವತಿಯನ್ನು ಮದುವೆ ಆಗಲಿದ್ದಾರೆ. ಈ ಕುರಿತು ಎಲ್ಲಾ ಮಾತುಕತೆ ಪೂರ್ಣಗೊಂಡ ಬಳಿಕ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಿಎಂ ಕುಮಾರಸ್ವಾಮಿ ಮಾತನಾಡಿ ನಾವು ನಿಖಿಲ್ ಮದುವೆ ಮಾತುಕತೆಗೆ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ವಿಜಯವಾಡದಲ್ಲಿ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಈ ಹಿಂದೆ ನಿಖಿಲ್ ಅವರು ಸಂದರ್ಶನದಲ್ಲಿ ಇನ್ನು ಮೂರು ವರ್ಷ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದರು. ಪಬ್ಲಿಕ್ ಟಿವಿ ಇಂದು ಈ ವಿಚಾರಕ್ಕೆ ಕರೆ ಮಾಡಿ ಸ್ಪಷ್ಟನೆ ಕೇಳಿದಾಗ, ಮದುವೆ ಮಾತುಕತೆ ಏನು ಇಲ್ಲ, ನಮಗೆ ಸಮಯ ಕೊಡಿ ತಿಳಿದುಕೊಂಡು ಹೇಳುತ್ತೇನೆ ಎಂದು ನಿಖಿಲ್ ಉತ್ತರಿಸಿದ್ದರು.

ಈ ವೇಳೆ ಆಂಧ್ರ ಪ್ರದೇಶದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸಿಎಂ ಕುಮಾರಸ್ವಾಮಿ ಅವರು ನಾವು ಸ್ನೇಹಿತರಾಗಿದ್ದು, ಸಹಜವಾಗಿ ಇಂದು ಮನೆಗೆ ಭೇಟಿ ನೀಡಿದ್ದಾರೆ. ನಿಖಿಲ್‍ರೊಂದಿಗೆ ಮದುವೆಯ ಸುದ್ದಿ ಬಗ್ಗೆ ಈ ವೇಳೆ ಚರ್ಚೆ ನಡೆದಿಲ್ಲ. ಸ್ನೇಹಿತರಾದ ಕಾರಣಕ್ಕೆ ಮಾತ್ರ ಭೇಟಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿ, ಇದು ಅವರ ವೈಯಕ್ತಿಕ ವಿಚಾರ, ಹುಡುಗಿ ಒಪ್ಪಿಗೆ ಆದರೆ ಮದುವೆ ಮಾಡೋಣ ಎಂದಿದ್ದಾರೆ. ಇಂದು ಸಿಎಂ ಕುಮಾರಸ್ವಾಮಿಯವರು ಅಮರಾವತಿಯ ದುರ್ಗಾ ದೇವಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=gRdK_wrERMI

Share This Article
Leave a Comment

Leave a Reply

Your email address will not be published. Required fields are marked *