ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

Public TV
1 Min Read

ಹುಬ್ಬಳ್ಳಿ: ಅಮ್ಮ ಬೇಕು ಅಮ್ಮ ಎಂದು ಹಠಹಿಡಿದಿದ್ದ 4 ವರ್ಷದ ಮಗುವಿನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನನಗೆ ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಮಗುವಿನ ತಾಯಿ ಕಾವೇರಿ ಆರೋಪಿಸಿದ್ದಾರೆ.

ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ್ ನಾಯ್ಡು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೇ ಕಾವೇರಿ ಅವರು ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ. ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು ಅಮ್ಮ ಬೇಕು ಅಂತ ಹಠ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಮಗುವಿನ ತಾಯಿ ಕಾವೇರಿ, ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಳೆ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *