ಮಡಿಕೇರಿ: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ರದ್ದಾದ ಮದುವೆಗೆ ಸಂಘಟನೆಗಳು ಮುಂದೆ ನಿಂತು ಮರುಜೀವ ನೀಡಿದ್ದಾರೆ.
ಎಮ್ಮೆತ್ತಾಳು ಗ್ರಾಮದಲ್ಲಿ ನಡೆಯಬೇಕಿದ್ದ ಮಂಜುಳಾ ಹಾಗೂ ರಜೀಶ್ ಪ್ರವಾಹದಿಂದಾಗಿ ರದ್ದಾಗುವ ಹಾಗೆ ಮಾಡಿತ್ತು. ಹಸಮಣೆ ಏರಬೇಕಿದ್ದ ವಧು ಹಾಗೂ ಕುಟುಂಬದವರ ಎಲ್ಲಾ ವಸ್ತುಗಳನ್ನ ಭೀಕರ ಪ್ರವಾಹ ಆಹುತಿ ಮಾಡಿಕೊಂಡು ಹೋಗಿತ್ತು. ಪ್ರವಾಹಕ್ಕೆ ಸಿಲುಕಿದ್ದ ವಧುವಿನ ಕುಟುಂಬದವರು ಎಲ್ಲಾ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಇನ್ನೇನು ಮಗಳ ಮದುವೆ ನಿಂತೇ ಹೋಯಿತಲ್ಲ ಎಂಬ ಚಿಂತೆಯಲ್ಲಿದ್ದ ಕುಟುಂಬದವರಿಗೆ ಸಾರ್ವಜನಿಕರು ಹಾಗೂ ಸಂಘಟನೆಗಳು ಸಹಾಯ ಹಸ್ತ ಚಾಚಿದ್ದು, ನಿಗದಿತ ದಿನಾಂಕದಂತೆ ಮದುವೆ ಮಾಡಲು ತೀರ್ಮಾನಿಸಿ, ಇಂದು ಬೆಳಗ್ಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಈ ಮೊದಲು ಕುಟುಂಬದವರು ಮಕ್ಕಂದೂರು ಸಭಾಂಗಣದಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು, ಆದರೆ ಪ್ರವಾಹಕ್ಕೆ ಸಿಲುಕಿದ್ದರಿಂದ ಮಡಿಕೇರಿಯಲ್ಲೇ ಮದುವೆ ಮಾಡಲು ಮುಂದಾಗಿದ್ದಾರೆ. ಪ್ರವಾಹದಿಂದ ಜೀವನವನ್ನೇ ಕಳೆದುಕೊಂಡ ಕುಟುಂಬಕ್ಕೆ ಆಸರೆಯಾದ ಸಾರ್ವಜನಿಕರಿಂದ, ಕುಟುಂಬದವರು ತಮ್ಮ ಎಲ್ಲಾ ನೋವನ್ನು ಮರೆತು ಮದುವೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಯುವತಿಯರು ಇಂದು ನಿರಾಶ್ರಿತರ ಕೇಂದ್ರದಲ್ಲಿ!
ಪ್ರವಾಹದಿಂದಾಗಿ ಮಕ್ಕೋಡ್ಲುವಿನ ಮಂಜುಳಾ ಹಾಗೂ ರಂಜಿತಾ ಎಂಬ ಯುವತಿಯರ ಮದುವೆಗಳು ರದ್ದಾಗುವ ಸ್ಥಿತಿಯಲ್ಲಿದ್ದವು. ಅಗಸ್ಟ್ 26 ಕ್ಕೆ ಮಂಜುಳ ಮದುವೆ ನಿಗದಿಯಾಗಿದ್ದರೆ, ಸೆಪ್ಟೆಂಬರ್ 12 ಕ್ಕೆ ರಂಜಿತಾ ವಿವಾಹ ನಿಗದಿಯಾಗಿತ್ತು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದ ಎರಡು ಕುಟುಂಬಗಳು ಬಗ್ಗೆ ಪಬ್ಲಿಕ್ ಟಿವಿ ವಿಸ್ತ್ರತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಗಮನಿಸಿದ ಸಿಎಂ ಕುಮಾರಸ್ವಾಮಿಯವರು ಯುವತಿಯರ ಮದುವೆಗೆ ನೆರವು ನೀಡಿದ್ದರು. ಹೀಗಾಗಿ ಇಂದು ಸರ್ಕಾರ ಹಾಗೂ ಸಂಘಟನೆಗಳ ಸಹಾಯದಿಂದ ಮದುವೆ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv