ಕರ್ತವ್ಯದ ಕೇಂದ್ರ ಸ್ಥಾನದಲ್ಲಿಯೇ ಮನೆ, ಕಚೇರಿ ಮಾಡಿ ಬೋರ್ಡ್ ಹಾಕಿಕೊಳ್ಳಬೇಕು: ಅಧಿಕಾರಿಗಳಿಗೆ ಡಿಕೆಶಿ ಸೂಚನೆ

Public TV
2 Min Read

ಬಳ್ಳಾರಿ: ಅಧಿಕಾರಿಗಳು ತಾವು ನಿರ್ವಹಿಸುವ ಕೇಂದ್ರದ ಸ್ಥಾನದಲ್ಲಿಯೇ ಮನೆ ಹಾಗೂ ಕಚೇರಿ ಮಾಡಿ ಬೋರ್ಡ್ ಹಾಕಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿರಾದ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಜಿಲ್ಲೆಗೆ ಪ್ರಪ್ರಥಮಬಾರಿ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ನಡೆಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅಭಿವೃದ್ಧಿಶೀಲ ಜಿಲ್ಲೆಯಾಗಿದೆ. ಮಲೆನಾಡಿನಿಂದ ಹರಿದು ಬರುವ ಪವಿತ್ರ ತುಂಗಭದ್ರ ನದಿಯು ಜಿಲ್ಲೆಯ ಜೀವನಾಡಿಯಾಗಿದ್ದಾಳೆ. ಇದರಿಂದ ರೈತರು ಶಿಸ್ತುಬದ್ಧವಾದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ನೀರು ಮತ್ತು ವಿದ್ಯುತ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜನರ ನಡುವೆ ಅಧಿಕಾರಿಗಳಿರಬೇಕು. ಹೀಗಾಗಿ ಎಲ್ಲಾ ಅಧಿಕಾರಿಗಳು ಏನು ಮಾಡುತ್ತಿರೋ ಗೊತ್ತಿಲ್ಲ, ಇನ್ನು ಎರಡು ತಿಂಗಳ ಒಳಗಾಗಿ ನೀವು ನಿಮ್ಮ ನಿಮ್ಮ ಕಾರ್ಯಕ್ಷೇತ್ರದಲ್ಲೇ ಜನರಿಗೆ ಸಿಗುವಂತಾಗಬೇಕು. ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿಯೇ ವಾಸ ಮಾಡಬೇಕು, ನೀವು ಬಾಡಿಗೆ ಮನೆ ಮಾಡ್ತಿರೋ, ಕ್ವಾರ್ಟರ್ಸ್ ನಲ್ಲಿ ಇರುತ್ತಿರೋ ಗೊತ್ತಿಲ್ಲ ಎಂದು ಖಡಕ್ ಆಗಿ ತಿಳಿಸಿದರು.

ಎಲ್ಲಾ ಹಂತಗಳಲ್ಲಿನ ಯಾವುದೇ ಕಾಮಗಾರಿ ನಡೆದರೂ ಅದು ಪಾರದರ್ಶಕವಾಗಿರಬೇಕು. ಎಲ್ಲದಕ್ಕೂ ಬಿಲ್ ಇರಬೇಕು, ಜಿಪಿಎಸ್ ಮೂಲಕ ಕೆಲಸ ಮಾಡಬೇಕು. ಎಲ್ಲಾ ಅಧಿಕಾರಿಗಳು ಎಲ್ಲಿದ್ದಾರೆ? ಎಲ್ಲಿ ಹೋಗುತ್ತಿದ್ದಾರೆ ಅನ್ನುವ ಮಾಹಿತಿ ಮೇಲಾಧಿಕಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂಬುದು ನನ್ನ ಆಡಳಿತ ವೈಖರಿಯ ಮೊದಲ ಹೆಜ್ಜೆಯಾಗಿದೆ. ಯಾವುದೇ ಇಲಾಖೆಯಲ್ಲಿ ಸರ್ಕಾರದ ಹಣ ಎಷ್ಟೇ ಖರ್ಚಾದರೂ ಅದಕ್ಕೆ ದಾಖಲೆ ಇರಬೇಕು. ಅಲ್ಲದೇ ಎಲ್ಲಾ ಇಲಾಖೆಗಳಲ್ಲೂ ಪರಿಚಯ ಪುಸ್ತಕ ಹೊಂದಿರಬೇಕು. ಈಗಾಗಲೇ ನಾನು ಜಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು.

ನಾನು ಬಳ್ಳಾರಿಗೆ ಬಂದು ಎರಡು ನಿಮಿಷ ಆಗಿದೆ. ಒಮ್ಮೆಲೆ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ಆದರೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕಾರ್ಯಕ್ಷೇತ್ರಕ್ಕೆ ಅಲ್ಲಾಡಿಸುವ ಕೆಲಸ ಮಾಡುತ್ತೇನೆ. ಜನಪ್ರತಿನಿಧಿಗಳು ಕೆಡಿಪಿ ಹಾಗೂ ತಾಪಂ ಸಭೆಗೆ ಹಾಗೂ ಇನ್ನಿತರ ಸಭೆಗಳಿಗೆ ಹಾಜರಾಗುವುದಿಲ್ಲವೆಂಬ ಗಂಭೀರ ಆರೋಪ ಇದೆ. ಇದನ್ನು ಸರಿ ಪಡಿಸುವ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಎಸ್ ಆರ್ ಹಿರೇಮಠರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಬದಲು, ಚುನಾವಣೆ ನಿಂತು ಆಯ್ಕೆಯಾಗಿ ಸದನದಲ್ಲಿ ಅಕ್ರಮಗಳ ಬಗ್ಗೆ ಪ್ರಸ್ತಾಪ ಮಾಡಲಿ. ಆಗ ಬೇಕಾದರೇ ತಪ್ಪು ಮಾಡಿದವರನ್ನು ಗಲ್ಲಿಗೆ ಹಾಕಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

ಸುಪ್ರೀಂ ತೀರ್ಪು ಬರುವ ಮುನ್ನವೇ ಯಡಿಯೂರಪ್ಪನವರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ. ತೀರ್ಪಿನ ಬಗ್ಗೆ ನಮ್ಮ ಪಕ್ಷದ ಕೆಲ ಸಚಿವರು ಸಮಾಧಾನಪಟ್ಟಿರಬಹುದು. ಆದರೆ ನಾನು ಈ ರೀತಿ ತೀರ್ಪು ಬರುತ್ತದೆಂದು ನಿರೀಕ್ಷೆ ಸಹ ಮಾಡಿರಲಿಲ್ಲ. ಮಹದಾಯಿ ನ್ಯಾಯಾಧಿಕರಣಕ್ಕೆ ಮತ್ತೆ ಮೇಲ್ಮನವಿ ಸಲ್ಲಿಸುತ್ತೇವೆ. ರಾಜ್ಯದ ನೀರಾವರಿ ಸಚಿವನಾಗಿದ್ದುಕೊಂಡು ಒಂದು ಹನಿ ನೀರನ್ನೂ ನಾನು ಬಿಡೋದಿಲ್ಲ, ನಮಗೆ ಸೇರಬೇಕಾದ ನೀರು ನಮಗೆ ಸೇರಲೇಬೇಕು ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *