ಬೈಕ್ ಓವರ್‌ಟೇಕ್ ಮಾಡಿದ್ದಕ್ಕೆ ಯುವಕರ ಮಧ್ಯೆ ಜಗಳ- ಬಿಡಿಸಲು ಬಂದವರ ಮೇಲೆ ಹಲ್ಲೆಗೈದು ಪರಾರಿ

Public TV
1 Min Read

ಯಾದಗಿರಿ: ಬೈಕ್ ಹಿಂದಿಕ್ಕಿದ್ದಕ್ಕೆ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದಲ್ಲಿ ಯುವಕರು ಜಗಳವಾಡಿದ್ದು, ಇದನ್ನು ಬಿಡಿಸಲು ಹೋದವರ ಮೇಲೆಯೇ ಅವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇಂದು ಬೆಳಗ್ಗೆ ಕಕ್ಕೇರಾ ಪಟ್ಟಣದ ಸವಾರನೊಬ್ಬ ಮತ್ತೊಂದು ಬೈಕ್ ಹಿಂದಿಕ್ಕಿ ಮುಂದೆ ಹೋಗಿದ್ದನು. ಮಧ್ಯಾಹ್ನ ಈ ಇಬ್ಬರು ಯುವಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪಟ್ಟಣದ ಮಧ್ಯೆ ಜಗಳವಾಡಿದ್ದಾರೆ. ಈ ವೇಳೆ ಇಬ್ಬರ ಸಹಚರರು ಆಗಮಿಸಿ ಬಡಿದಾಡಿಕೊಂಡಿದ್ದಾರೆ.

ಈ ಜಗಳವನ್ನು ನೋಡಿದ ಕೆಲವು ಸ್ಥಳೀಯರು ಜಗಳ ಬಿಡಿಸಲು ಹೋಗಿದ್ದರು. ಯಾರ ಮಾತಿಗೂ ಬಗ್ಗದ ಯುವಕರು ಜಗಳ ಬಿಡಿಸಲು ಬಂದವರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಅಂಬರೀಶ್ ಸೋಲಾಪುರ ಸೇರಿದಂತೆ ಕೆಲವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಬಾರಿ ಕಾರೊಂದರ ಮೇಲೆ ಕಲ್ಲು ಬಿದ್ದ ಪರಿಣಾಮ ಮುಂಬದಿಯ ಗಾಜು ಜಖಂಗೊಂಡಿದೆ.

ವ್ಯಕ್ತಿಯೊಬ್ಬರು ತಕ್ಷಣವೇ ಕೊಡೇಕಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರು ಬರುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಯುವಕರು ತಮ್ಮ ಬೈಕ್‍ಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಪಟ್ಟಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಾರಿಯಾದ ಯುವಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದ ಕುರಿತು ಮಾಹಿತಿ ನೀಡಲು ಸ್ಥಳದಲ್ಲಿದ್ದ ಅನೇಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *