ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತ

Public TV
1 Min Read

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ.

ಪುತ್ತೂರು ತಾಲೂಕಿನ ಗುಂಡ್ಯಾ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಉದನೆ ಪ್ರದೇಶದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ನದಿ ನೀರು ಹರಿಯುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿವೆ. ಹೆದ್ದಾರಿಯಲ್ಲಿ ನಿಂತಿರುವ ನೀರು ಕಡಿಮೆಯಾಗುವ ತನಕ ಸಂಚಾರ ನಿರ್ಬಂಧವಾಗಿದೆ. ಮುಂಜಾಗೃತ ಕ್ರಮವಾಗಿ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಬಂದಿದ್ದಾರೆ.

ಮಳೆಯಿಂದಾಗಿ ಕರಾವಳಿಯ ನದಿ ಮತ್ತು ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದ್ದು, ಕಪಿಲ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಶಿಶಿಲೇಶ್ವರ ದೇವಸ್ಥಾನ ಸಂಪರ್ಕಿಸುವ ತೂಗು ಸೇತುವೆ ಕೂಡ ಮುಳುಗಡೆಯಾಗಿದೆ.

ಬುಧವಾರ ರಾತ್ರಿಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಾಗುತ್ತಿದೆ. ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತವಾಗುತ್ತಿದೆ. ಮಾಣಿ -ಮೈಸೂರು ರಾಜ್ಯ ಹೆದ್ದಾರಿಯ ಪೆರಾಜೆ ಸಮೀಪದ ಅಪಾಯಕಾರಿ ಹೊಂಡಗಳನ್ನು ಸುಳ್ಯ ಠಾಣೆಯ ಎಸ್.ಐ. ಮಂಜುನಾಥ್ ಮತ್ತು ಸಿಬಂದಿ ಹೊಂಡಗಳನ್ನು ಮುಚ್ಚಿದ್ದಾರೆ. ಲಾಠಿ ಹಿಡಿಯುವ ಕೈಗಳು ಹೆದ್ದಾರಿಯಲ್ಲಿ ಹಾರೆ ಮತ್ತು ಪಿಕಾಸು ಹಿಡಿದು ಹೆದ್ದಾರಿಯ ಮರಣ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿಸಿದ್ದಾರೆ. ಎಡೆ ಬಿಡದೆ ಮಳೆಯ ನಡುವೆ ಪೊಲೀಸರು ಈ ಮಾದರಿ ಕಾರ್ಯ ಮಾಡಿದ್ದು, ಜನ ಪ್ರಶಂಸೆಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *